ನವದೆಹಲಿ: 'ಉದ್ಯೋಗಕ್ಕಾಗಿ ಭೂಮಿ' ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಹಾಗೂ ಆರ್ಜೆಡಿ ಪಕ್ಷದ ನಾಯಕ ಲಾಲೂ ಪ್ರಸಾದ್ ಅವರ ವಿಚಾರಣೆಯನ್ನು ಮಂಗಳವಾರ ಆರಂಭಿಸಿದ್ದೇವೆ ಎಂದು ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ತಿಳಿಸಿದ್ದಾರೆ.
ಭೂಮಿಯನ್ನು ಕೊಡುಗೆಯಾಗಿ ನೀಡುವಿಕೆ ಅಥವಾ ಕಡಿಮೆ ದರದಲ್ಲಿ ಭೂ ಮಾರಾಟ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡಿದ ಆರೋಪದಲ್ಲಿ ಲಾಲೂ ಪ್ರಸಾದ್ ಕುಟುಂಬ ಮತ್ತು ಇತರ 14 ಮಂದಿಯನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು ಸಮನ್ಸ್ ಕೂಡ ನೀಡಲಾಗಿದೆ ಎಂದರು.
ಬೆಳಿಗ್ಗೆ ಸುಮಾರು 10:40ಕ್ಕೆ ಪಂಡ್ರಾ ಪಾರ್ಕ್ನಲ್ಲಿರುವ ಲಾಲೂ ಅವರ ನಿವಾಸಕ್ಕೆ ಸಿಬಿಐ ತಂಡ ಭೇಟಿ ಕೊಟ್ಟಿದೆ. ಪ್ರಕರಣ ಸಂಬಂಧ ಇಡೀ ದಿನ ವಿಚಾರಣೆ ನಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.
ಲಾಲೂ ಅವರ ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಅವರು, ‘ನಮ್ಮ ಕುಟುಂಬವು ಬಿಜೆಪಿಯನ್ನು ತೀವ್ರ ವಿರೋಧಿಸುತ್ತಿರುವ ಕಾರಣ ಸಿಬಿಐ ಕ್ರಮಕ್ಕೆ ಮುಂದಾಗಿದೆ‘ ಎಂದು ಆಕ್ರೋಶ ಹೊರಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.