ಮುಂಬೈ: ಮಹಾರಾಷ್ಟ್ರ ಸರ್ಕಾರವು ಮಾಜಿ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ವಿಫಲಗೊಳಿಸಲು ‘ನಾಚಿಕೆ ಬಿಟ್ಟು’ ಯತ್ನಿಸುತ್ತಿದೆ ಎಂದು ಬಾಂಬೆ ಹೈಕೋರ್ಟ್ಗೆ ಸಿಬಿಐ ಬುಧವಾರ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಯಾವುದೇ ರೀತಿಯ ವಿನಾಯಿತಿ ನೀಡಬಾರದು ಎಂದೂ ಹೈಕೋರ್ಟ್ಗೆ ಸಿಬಿಐ ಮನವಿ ಮಾಡಿದೆ.
ದೇಶ್ಮುಖ್ ವಿರುದ್ಧದ ತನಿಖೆಗೆ ಸಂಬಂಧಿಸಿ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಮತ್ತು ಡಿಜಿಪಿ ಸಂಜಯ್ ಪಾಂಡೆಗೆ ಸಿಬಿಐ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಮಹಾರಾಷ್ಟ್ರ ಸರ್ಕಾರವು ಹೈಕೋರ್ಟ್ಗೆ ಮನವಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಬಾರದು ಎಂದು ಸಿಬಿಐ ವಿನಂತಿಸಿದೆ.
ದೇಶ್ಮುಖ್ ವಿರುದ್ಧ ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿರುವ ಆರೋಪಗಳ ತನಿಖೆ ಮಾಡುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ. ಕಾನೂನುಬದ್ಧವಾಗಿ ತನಿಖೆ ನಡೆಸಬೇಕಿದ್ದ ಸರ್ಕಾರ ಸುಮ್ಮನಾಗಿದ್ದಲ್ಲದೆ, ಸಿಬಿಐ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಬೇಕು ಎಂದು ಹೈಕೋರ್ಟ್ಗೆ ಮನವಿ ಸಲ್ಲಿಸಿದೆ ಎಂದು ಸಿಬಿಐ ಪರ ವಿಚಾರಣೆಗೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಏಪ್ರಿಲ್ 5ರಂದು ಹೈಕೋರ್ಟ್ ನೀಡಿದ್ದ ಆದೇಶದಂತೆ ಸಿಬಿಐ ಪ್ರಾಥಮಿಕ ತನಿಖೆ ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ಮಹಾರಾಷ್ಟ್ರ ಸರ್ಕಾರ ಅಸಹಕಾರದಿಂದ ವರ್ತಿಸುತ್ತಿದೆ. ಹೀಗಾಗಿ ಸರ್ಕಾರವು ನ್ಯಾಯಾಲಯದಿಂದ ಯಾವುದೇ ವಿನಾಯಿತಿ ಪಡೆಯಲು ಅರ್ಹವಾಗಿಲ್ಲ ಎಂದು ಲೇಖಿ ವಾದಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸೇರಿದಂತೆ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಮುಂಬೈಯ ವಿಶೇಷ ನ್ಯಾಯಾಲಯವು ಅನಿಲ್ ದೇಶಮುಖ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಸೋಮವಾರ ಆದೇಶಿಸಿತ್ತು. ಇದಾದ ಕೆಲವೇ ದಿನಗಳಲ್ಲೇ, ಆದೇಶ ನೀಡಿದ್ದ ನ್ಯಾಯಾಧೀಶರಾದ ಎಚ್.ಎಸ್. ಸತ್ಭಾಯ್ ಅವರನ್ನು ಯವತ್ಮಾಲ್ ಜಿಲ್ಲೆಗೆ ವರ್ಗಾಯಿಸಿ ಬಾಂಬೆ ಹೈಕೋರ್ಟ್ ಆದೇಶಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.