ನವದೆಹಲಿ: 10, 11 ಮತ್ತು 12 ತರಗತಿಗಳ ಫಲಿತಾಂಶವನ್ನು ಆಧರಿಸಿ, 30:30:40 ಸೂತ್ರವನ್ನು ಅಳವಡಿಸಿಕೊಂಡು, 12ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್ಇ) ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
10 ಮತ್ತು 11ನೇ ತರಗತಿಯಲ್ಲಿ ಗಳಿಸಿರುವ ಅಂಕಗಳಿಂದ ತಲಾ ಶೇ 30 ಹಾಗೂ 12ನೇ ತರಗತಿಯ ಆಂತರಿಕ ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳಿಂದ ಶೇ 40ರಷ್ಟು ಅಂಕಗಳನ್ನು ಗಣನೆಗೆ ತೆಗೆದುಕೊಂಡು, 12ನೇ ತರಗತಿಯ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
ಈ ಸೂತ್ರದ ಮೌಲ್ಯಮಾಪನದಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಈ ಸಾಂಕ್ರಾಮಿಕ ರೋಗದ ತೀವ್ರತೆ ಕಡಿಮೆಯಾದ ನಂತರ 12ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.
ಸಿಬಿಎಸ್ಇ ಶಿಕ್ಷಣ ಪದ್ಧತಿಯಲ್ಲಿರುವ ವಿವಾದ ಬಗೆಹರಿಸುವ ಕಾರ್ಯವಿಧಾನಕ್ಕೆ ಬರುವಂತೆ ಉನ್ನತ ನ್ಯಾಯಾಲಯವು ವೇಣುಗೋಪಾಲ್ಗೆ ತಿಳಿಸಿತು. ಇದರಿಂದ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ನೋಡಿಕೊಳ್ಳಬಹುದು ಎಂದು ಅದು ಅಭಿಪ್ರಾಯಪಟ್ಟಿತು.
‘ವಿದ್ಯಾರ್ಥಿಗಳ ಕಾಳಜಿಗೆ ಸಂಬಂಧಿಸಿದಂತೆ, ಅವರಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸಲು ಸಮಿತಿ ರಚಿಸಲಾಗುವುದು‘ ಎಂದು ವೇಣುಗೋಪಾಲ್ ನ್ಯಾಯಪೀಠಕ್ಕೆ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.