ADVERTISEMENT

ಒಂಟೆಗೆ ಬೈಕ್‌ ಡಿಕ್ಕಿ: ಬೆಂಗಳೂರಿನ ಬೈಕ್‌ ಸಾಹಸಿ ಕಿಂಗ್‌ ರಿಚರ್ಡ್‌ ಸಾವು

ಪಿಟಿಐ
Published 15 ಜನವರಿ 2021, 15:40 IST
Last Updated 15 ಜನವರಿ 2021, 15:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯಲ್ಲಿ ಒಂಟೆಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಹೆಸರಾಂತ ಬೈಕ್‌ ಸಾಹಸಿ ಕಿಂಗ್‌ ರಿಚರ್ಡ್‌ ಶ್ರೀನಿವಾಸನ್‌ ಅವರು ಮೃತಪಟ್ಟಿದ್ದಾರೆ.

ರಿಚರ್ಡ್‌ ಅವರು ಮೂವರು ಸ್ನೇಹಿತರೊಂದಿಗೆ ಬುಧವಾರ ರಾತ್ರಿ ಫತೇಗಢ ಉಪ ವಿಭಾಗದ ವ್ಯಾಪ್ತಿಯ ರಸ್ತೆಯ ಮೂಲಕ ಜೈಸಲ್ಮೇರ್‌ನತ್ತ ಹೊರಟಿದ್ದರು. ಈ ವೇಳೆ ಒಂಟೆಯೊಂದು ಏಕಾಏಕಿ ಅಡ್ಡಬಂದಿದೆ. ರಿಚರ್ಡ್‌ ಅವರು ಚಲಾಯಿಸುತ್ತಿದ್ದ ಬೈಕ್‌ ಅದಕ್ಕೆ ಗುದ್ದಿದೆ. ಘಟನೆಯಲ್ಲಿ ರಿಚರ್ಡ್‌ ಅವರ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಅವರು ಕೊನೆಯುಸಿರೆಳೆದಿದ್ದರು. ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು’ ಎಂದು ಸಂಗಾರ್‌ ಪೊಲೀಸ್‌ ಠಾಣೆಯ ಮುಖ್ಯ ಪೇದೆ ಸೋನಾರಾಮ್‌ ಭಾಟಿ ತಿಳಿಸಿದ್ದಾರೆ.

‘ಬೆಂಗಳೂರಿನ ನಾರಾಯಣ ಹಾಗೂ ಚೆನ್ನೈನ ಡಾ.ವಿಜಯ್‌ ಮತ್ತು ವೇಣುಗೋಪಾಲ್‌ ಅವರೊಂದಿಗೆ ರಿಚರ್ಡ್‌ ಅವರು ಬೈಕ್‌ನಲ್ಲೇ ರಾಜಸ್ಥಾನ ಪ್ರವಾಸ ಕೈಗೊಂಡಿದ್ದರು. ಈ ತಂಡವು ಪ್ರವಾಸ ಮುಗಿಸಿ ಇದೇ 23ರಂದು ಬೆಂಗಳೂರಿಗೆ ಹಿಂತಿರುಗಬೇಕಿತ್ತು’ ಎಂದು ಅವರು ಹೇಳಿದ್ದಾರೆ.

ADVERTISEMENT

ರಿಚರ್ಡ್‌ ಅವರು ಈ ಹಿಂದೆ ಟೈಗರ್‌–800 ಬೈಕ್‌ನಲ್ಲಿ ಬೆಂಗಳೂರಿನಿಂದ ಹೊರಟು ಏಷ್ಯಾ, ಯುರೋಪ್‌, ಅಮೆರಿಕ ಮತ್ತು ಆಸ್ಟ್ರೇಲಿಯಾದ ವಿವಿಧ ಪ್ರದೇಶಗಳನ್ನು ಸುತ್ತಿ ಬಂದಿದ್ದರು ಎನ್ನಲಾಗಿದೆ. ಆಫ್ರಿಕಾ ಖಂಡಕ್ಕೆ ಪ್ರವಾಸ ಕೈಗೊಳ್ಳುವ ಯೋಜನೆ ಹೊಂದಿದ್ದ ಅವರು ಅದಕ್ಕಾಗಿ ಇತ್ತೀಚೆಗೆ ಬಿಎಂಡಬ್ಲ್ಯು ಜಿಎಸ್‌ ಬೈಕ್‌ ಖರೀದಿಸಿದ್ದರು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.