ADVERTISEMENT

ಆಳ್ವ ಯಾರಿಗಾದರೂ ಕರೆ ಮಾಡಬಹುದು: ಫೋನ್ ಕದ್ದಾಲಿಕೆ ಆರೋಪ ನಿರಾಕರಿಸಿದ ಕೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2022, 15:41 IST
Last Updated 26 ಜುಲೈ 2022, 15:41 IST
ಮಾರ್ಗರೆಟ್ ಆಳ್ವ
ಮಾರ್ಗರೆಟ್ ಆಳ್ವ    

ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿರುವ ಮಾರ್ಗರೆಟ್ ಆಳ್ವ ಅವರು ಮಾಡಿರುವ ಫೋನ್ ಕದ್ದಾಲಿಕೆ ಆರೋಪವನ್ನು ಕೇಂದ್ರ ಸರ್ಕಾರ ಮಂಗಳವಾರ ತಳ್ಳಿಹಾಕಿದೆ.

ತಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಟ್ವೀಟ್‌ ಮಾಡಿದ್ದ ಅಳ್ವ, ‘ಹೊಸ ಭಾರತದ ನೇತೃತ್ವ ವಹಿಸಿರುವ ‘ಬಿಗ್ ಬ್ರದರ್’ ಒಬ್ಬರು ಸಂಸದರು ಹಾಗೂ ರಾಜಕೀಯ ಪಕ್ಷಗಳ ನಾಯಕರ ದೂರವಾಣಿ ಕರೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

‘ಇತ್ತೀಚೆಗೆ ಅನೇಕ ಸಂಸದರು ಹಾಗೂ ರಾಜಕೀಯ ನಾಯಕರು ಮೇಲಿಂದ ಮೇಲೆ ತಮ್ಮ ಮೊಬೈಲ್‌ಗಳನ್ನು ಹಾಗೂ ಸಿಎಮ್‌ ಕಾರ್ಡುಗಳನ್ನು ಬದಲಿಸುತ್ತಿದ್ದಾರೆ. ಇಂತಹ ಭಯ ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ’ ಎಂದು ಆಳ್ವ ಹೇಳಿದ್ದಾರೆ.

ADVERTISEMENT

ಅಳ್ವ ಆರೋಪ ಕುರಿತ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ‘ನಾವೇಕೆ ಅವರ ಫೋನ್ ಕದ್ದಾಲಿಕೆ ಮಾಡಬೇಕು? ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶದ ಬಗ್ಗೆ ನಮಗೆ ವಿಶ್ವಾಸವಿದೆ. ಅವರು ಯಾರಿಗಾದರೂ ಕರೆ ಮಾಡಬಹುದು, ಅವರು ತುಂಬಾ ಹಿರಿಯ ವ್ಯಕ್ತಿ ಮತ್ತು ಅಂತಹ ಆರೋಪಗಳನ್ನು ಮಾಡಬಾರದು’ ಎಂದಿದ್ದಾರೆ.

ಚುನಾವಣಾ ಪ್ರಚಾರದ ಭಾಗವಾಗಿ ಆಳ್ವ ಅವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಕರೆ ಮಾಡಿ ಮತ ಚಲಾಯಿಸುವಂತೆ ವಿನಂತಿಸಿದ್ದಾರೆ.

ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಚುನಾವಣಾ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.