ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ (ಸಂಗ್ರಹ ಚಿತ್ರ)
ನವದೆಹಲಿ: ಅಂತಿಮ ವರದಿಯನ್ನು ಸಲ್ಲಿಸಲು ಮಹದಾಯಿ ಜಲ ವಿವಾದ ನ್ಯಾಯಮಂಡಳಿಯ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಸಂಶೋಧನೆ ಪೂರ್ಣಗೊಳಿಸಲು 6 ತಿಂಗಳ ಹೆಚ್ಚುವರಿ ಸಮಯಾವಕಾಶ ನೀಡಲಾಗಿದೆ ಎಂದು ಜಲಶಕ್ತಿ ಸಚಿವಾಲಯ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಮಹದಾಯಿ ನೀರು ಹಂಚಿಕೆ ಸಂಬಂಧ ಹಲವು ವರ್ಷಗಳಿಂದ ವಿವಾದ ಇದೆ.
2010ರ ನವೆಂಬರ್ 16ರಂದು ಅಂತರರಾಜ್ಯ ಜಲ ವಿವಾದ ಕಾಯ್ದೆ–1956ರಡಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿತ್ತು. ಮಹದಾಯಿ ನದಿ ಹಾಗೂ ಅದರ ನದಿ ಕಣಿವೆ ಸಂಬಂಧ ಇರುವ ವಿವಾದಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಇದನ್ನು ಸ್ಥಾಪಿಸಲಾಗಿತ್ತು.
ಮೂರು ವರ್ಷಗಳ ಒಳಗಾಗಿ ಅಂದರೆ 2013ರ ನವೆಂಬರ್ 15ಕ್ಕೆ ಮುಂಚಿತವಾಗಿ ನ್ಯಾಯಮಂಡಳಿ ತನ್ನ ವರದಿಯನ್ನು ಸಲ್ಲಿಸಬೇಕಿತ್ತು. ಆದರೆ ವಿಸ್ತರಣೆ ಬಯಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿತ್ತು.
ಇದಾದ ಬಳಿಕ ನ್ಯಾಯಮಂಡಳಿ ಹಲವು ಬಾರಿ ವಿಸ್ತರಣೆ ಕೋರಿತ್ತು. ಕೊನೆಯ ಬಾರಿ 2025ರ ಫೆ. 16ರಂದು ಅವಧಿಯನ್ನು ಒಂದು ವರ್ಷ ವಿಸ್ತರಿಸಬೇಕು ಎಂದು ನ್ಯಾಯಮಂಡಳಿ ಮನವಿ ಮಾಡಿತ್ತು. ಇದೀಗ ಕೇಂದ್ರ ಸರ್ಕಾರ 6 ತಿಂಗಳು ವಿಸ್ತರಣೆ ನೀಡಿದೆ.
2018ರ ಆಗಸ್ಟ್ 14ರಂದು ನ್ಯಾಯಮಂಡಳಿಯು ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿತ್ತು.
2018ರಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರವು ನ್ಯಾಯಮಂಡಳಿಗೆ ಹೆಚ್ಚಿನ ಉಲ್ಲೇಖಗಳನ್ನು ನೀಡಿತ್ತು. ಈ ವೇಳೆ ಒಂದು ವರ್ಷ ಅವಧಿಯನ್ನು ವಿಸ್ತರಿಸಲಾಗಿತ್ತು. ಇದಕ್ಕೂ ಮುನ್ನ 2024ರ ಆಗಸ್ಟ್ನಲ್ಲಿ 180 ದಿನಗಳ ಕಾಲ ಅವಧಿ ವಿಸ್ತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.