ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಭಾಗದ ಕೇಂದ್ರೀಯ ಸಶಸ್ತ್ರ ಪಡೆಯ (ಸಿಎಪಿಎಫ್) ಸಿಬ್ಬಂದಿಯ ಅನುಕೂಲಕ್ಕಾಗಿ ವಿಮಾನಯಾನ ಸೌಲಭ್ಯವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ.
ಪುಲ್ವಾಮಾ ದಾಳಿ ನಂತರ ಗೃಹ ಸಚಿವಾಲಯ ಈ ನಿರ್ಧಾರ ಪ್ರಕಟಿಸಿದೆ. ದೆಹಲಿ–ಶ್ರೀನಗರ, ಶ್ರೀನಗರ–ದೆಹಲಿ, ಜಮ್ಮು–ಶ್ರೀನಗರ ಮತ್ತು ಶ್ರೀನಗರ–ಜಮ್ಮು ಭಾಗದಲ್ಲಿ ಪ್ರಯಾಣಿಸುವ ಎಲ್ಲಾ ಸಿಎಪಿಎಫ್ ಸಿಬ್ಬಂದಿಯೂ ಈ ಸೌಲಭ್ಯ ಬಳಿಸಿಕೊಳ್ಳಬಹುದು.
ಇಲ್ಲಿಯವರೆಗೆ ವಿಮಾನ ಯಾನ ಸೌಲಭ್ಯವಿಲ್ಲದ ಸಿಎಪಿಎಫ್ನಕಾನ್ಸ್ಟೆಬಲ್ , ಹೆಡ್ ಕಾನ್ಸ್ಟೆಬಲ್ ಮತ್ತು ಎಎಸ್ಐ ಸೇರಿ ಒಟ್ಟು 7,80,000 ಸಿಬ್ಬಂದಿಗೆ ಇದರಿಂದ ಅನುಕೂಲವಾಗಲಿದೆ.ಕೆಲಸದ ಸಂದರ್ಭದಲ್ಲಿ ಪ್ರಯಾಣಿಸುವುದು ಹಾಗೂ ರಜೆ ವೇಳೆಯ ಪ್ರಯಾಣಿಸುವುದು ಎಲ್ಲವೂ ಇದರಲ್ಲಿ ಒಳಗೊಳ್ಳುತ್ತದೆ.
ಸಿಎಪಿಎಫ್ಗೆ ಈಗಿರುವ ಸರಕು ಸಾಗಣೆ ವಿಮಾನ ಸೇವೆಗೆ ಹೆಚ್ಚುವರಿಯಾಗಿ ಈ ಸೌಲಭ್ಯವನ್ನು ನೀಡಲಾಗಿದೆ. ಸಿಎಪಿಎಫ್ ಜವಾನರ ತಮ್ಮ ಊರುಗಳಿಗೆ ಹೋಗುವ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಸೌಲಭ್ಯವನ್ನು ನೀಡಲಾಗಿದೆ.
ಫೆಬ್ರುವರಿ 14ರಂದು ಸಿಆರ್ಪಿಎಫ್ ಸಿಬ್ಬಂದಿ ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುವಾಗಲೇ ಉಗ್ರರ ಆತ್ಮಾಹುತಿ ದಾಳಿಗೆ ಸುಮಾರು 40 ಮಂದಿ ಜವಾನರು ಮೃತಪಟ್ಟಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಈ ಸಿಎಪಿಎಫ್ ಜವಾನರಿಗೆ ಈ ಸೌಲಭ್ಯ ಒದಗಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.