ADVERTISEMENT

ರೋಮ್‌ನ ವಿಶ್ವ ಶಾಂತಿ ಸಭೆಯಲ್ಲಿ ಭಾಗವಹಿಸಲು ಮೋದಿ ನನಗೆ ಅನುಮತಿ ನೀಡಲಿಲ್ಲ: ಮಮತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2021, 12:42 IST
Last Updated 25 ಸೆಪ್ಟೆಂಬರ್ 2021, 12:42 IST
ಪಶ್ಚಿಮ ಬಂಗಾಳದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಮೋದಿ ಅವರು ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡುತ್ತಿದ್ದ ಕ್ಷಣ (ಸಂಗ್ರಹ ಚಿತ್ರ– ಪಿಟಿಐ)
ಪಶ್ಚಿಮ ಬಂಗಾಳದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಮೋದಿ ಅವರು ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡುತ್ತಿದ್ದ ಕ್ಷಣ (ಸಂಗ್ರಹ ಚಿತ್ರ– ಪಿಟಿಐ)    

ಕೋಲ್ಕತ್ತ: ರೋಮ್‌ನಲ್ಲಿ ನಿಗದಿಯಾಗಿದ್ದ ವಿಶ್ವ ಶಾಂತಿಯ ಕುರಿತ ಸಭೆಯಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರ ನನಗೆ ಅನುಮತಿ ನಿರಾಕರಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ಕೋಲ್ಕತ್ತದಲ್ಲಿ ಶನಿವಾರ ಮಾತನಾಡಿರುವ ಅವರು, ‘ರೋಮ್‌ನಲ್ಲಿ ವಿಶ್ವ ಶಾಂತಿಯ ಕುರಿತು ಒಂದು ಸಭೆ ಇತ್ತು. ಅಲ್ಲಿಗೆ ನನ್ನನ್ನು ಆಹ್ವಾನಿಸಲಾಯಿತು. ಜರ್ಮನ್ ಚಾನ್ಸಲರ್‌, ಪೋಪ್ (ಫ್ರಾನ್ಸಿಸ್) ಕೂಡ ಭಾಗವಹಿಸಲಿದ್ದಾರೆ. ನನಗೆ ಹಾಜರಾಗಲು ಇಟಲಿ ವಿಶೇಷ ಅನುಮತಿ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಮುಖ್ಯಮಂತ್ರಿಯೊಬ್ಬರಿಗೆ ಹೀಗೆ ಮಾಡಿದ್ದು ಸರಿಯಲ್ಲ,‘ ಎಂದು ಮಮತಾ ಹೇಳಿದ್ದಾರೆ.

‘ನೀವು ನನ್ನನ್ನು ತಡೆಯಲು ಸಾಧ್ಯವಿಲ್ಲ. ನಾನೇನು ವಿದೇಶಗಳಿಗೆ ಹೋಗಲು ಉತ್ಸುಕಳಾಗಿಲ್ಲ. ಆದರೆ ಇದು ರಾಷ್ಟ್ರದ ಗೌರವದ ಪ್ರಶ್ನೆ. ನೀವು (ಮೋದಿ) ಹಿಂದುಗಳ ಬಗ್ಗೆ ಮಾತನಾಡುತ್ತೀರಿ. ನಾನು ಕೂಡ ಹಿಂದೂ ಮಹಿಳೆ. ನೀವು ಯಾಕೆ ನನ್ನನ್ನು ತಡೆಯುತ್ತೀರಿ? ನಿಮಗೆ ಅಸೂಯೆ ಇದೆ,’ ಎಂದು ಮಮತಾ ಹೇಳಿದ್ದಾರೆ.

ADVERTISEMENT

ವಿಶ್ವ ಶಾಂತಿಯ ಕುರಿತ ಚರ್ಚೆಗಾಗಿ ರೋಮ್‌ನ ‘ಸ್ಯಾಂಟ್ ಎಜಿಡಿಯೋ’ ಸಮುದಾಯವು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸಿತ್ತು. ಪೋಪ್ ಫ್ರಾನ್ಸಿಸ್, ಅಲ್-ಅಜರ್ (ಈಜಿಪ್ಟ್) ಗ್ರೇಟ್ ಇಮಾಮ್ ಅಹ್ಮದ್ ಅಲ್-ತಯ್ಯಿಬ್, ಜರ್ಮನ್ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಅವರನ್ನು ಈ ಸಭೆಗೆ ಆಹ್ವಾನಿಸಲಾಗಿತ್ತು. ರೋಮ್‌ನಲ್ಲಿ ಅಕ್ಟೋಬರ್‌ 6 ಮತ್ತು 7ರಂದು ಈ ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.