ADVERTISEMENT

ಲೋಕಪಾಲ: ತನಿಖಾ ನಿರ್ದೇಶಕರ ನೇಮಕ ಮಾಡದ ಕೇಂದ್ರ- ಆರ್‌ಟಿಐನಲ್ಲಿ ಮಾಹಿತಿ

ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ ಅರ್ಜಿಯಲ್ಲಿ ಮಾಹಿತಿ ಬಹಿರಂಗ

ಪಿಟಿಐ
Published 18 ಜುಲೈ 2021, 10:51 IST
Last Updated 18 ಜುಲೈ 2021, 10:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭ್ರಷ್ಟಾಚಾರ ನಿಗ್ರಹ ಸಂಬಂಧ ರಚನೆಯಾಗಿರುವ ಲೋಕಪಾಲಕ್ಕೆ ಬರುವ ದೂರುಗಳ ತನಿಖೆ ಮಾಡಲು ಕೇಂದ್ರ ಸರ್ಕಾರ ಎರಡು ವರ್ಷಗಳಿಂದ ತನಿಖಾ ನಿರ್ದೇಶಕರನ್ನು ನೇಮಕ ಮಾಡದೆ ಇರುವ ವಿಷಯ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಬಹಿರಂಗಗೊಂಡಿದೆ.

ತನಿಖಾ ನಿರ್ದೇಶಕರ ನೇಮಕ ಕುರಿತು ಪತ್ರಕರ್ತರೊಬ್ಬರು ಆರ್‌ಟಿಐನಲ್ಲಿ ಮಾಹಿತಿ ಕೋರಿದ್ದರು.

‘ಕೇಂದ್ರ ಸರ್ಕಾರವು ಇನ್ನೂ ತನಿಖಾ ನಿರ್ದೇಶಕರನ್ನು ನೇಮಿಸಿಲ್ಲ. ಆದರೂ, ಲೋಕಪಾಲಕ್ಕೆ ಸಾರ್ವಜನಿಕರಿಂದ ತನಿಖೆ ನಡೆಸುವಂತೆ ಕೋರಿ ದೂರುಗಳು ಬರುತ್ತಿವೆ. ಅವುಗಳನ್ನು ಸ್ವೀಕರಿಸಲಾಗುತ್ತಿದೆ’ ಎಂದು ಕೇಂದ್ರ ಜಾಗೃತ ದಳವು (ಸಿವಿಸಿ) ಆರ್‌ಟಿಐನಲ್ಲಿ ಕೋರಿದ ಮಾಹಿತಿಗೆ ಉತ್ತರ ನೀಡಿದೆ.

ADVERTISEMENT

2019ರ ಮಾರ್ಚ್ 23ರಂದು ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ಅವರು ಲೋಕಪಾಲ ಅಧ್ಯಕ್ಷರಾಗಿ ನೇಮಕವಾಗಿದ್ದರು. ಪ್ರಧಾನಿ ಸೇರಿದಂತೆ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸುವ ಅಧಿಕಾರವನ್ನುಈ ಸಂಸ್ಥೆಗೆ ನೀಡಲಾಗಿದೆ.

ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013ರ ಪ್ರಕಾರ ಲೋಕಪಾಲಕ್ಕೆ ತನಿಖಾ ನಿರ್ದೇಶಕರು ಇರಬೇಕು. ಈ ನಿರ್ದೇಶಕರ ಸ್ಥಾನವು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗಿಂತ ಕೆಳಗೆ ಇರಬಾರದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.