ADVERTISEMENT

ವಿಭಜನೆಯತ್ತ ಗುಪ್ಕಾರ್ ಮೈತ್ರಿಕೂಟ: ಆರೋಪ ತಳ್ಳಿ ಹಾಕಿದ ಮೆಹಬೂಬಾ

ಪಿಟಿಐ
Published 4 ಏಪ್ರಿಲ್ 2021, 11:25 IST
Last Updated 4 ಏಪ್ರಿಲ್ 2021, 11:25 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ/ನವದೆಹಲಿ: ‘ಮುಖ್ಯವಾಹಿನಿಯ ಆರು ಪಕ್ಷಗಳ ಒಕ್ಕೂಟವಾಗಿರುವ ಗುಪ್ಕಾರ್ ಮೈತ್ರಿಕೂಟವು ವಿಭಜನೆಯತ್ತ ಸಾಗುತ್ತಿದೆ’ಎನ್ನುವ ಕೇಂದ್ರ ಸರ್ಕಾರದ ಆರೋಪವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾನುವಾರ ತಳ್ಳಿ ಹಾಕಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಕೇಂದ್ರ ಸರ್ಕಾರದ ಧೋರಣೆಯನ್ನು ಗಮನಿಸಿದರೆ ಪಿಎಜಿಡಿಯು ಒಗ್ಗಟಾಗಿರುವುದು ಬಿಟ್ಟು ಅನ್ಯಮಾರ್ಗವಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಗುಪ್ಕಾರ್ ಮೈತ್ರಿಕೂಟದಂಥ ಒಕ್ಕೂಟ ನೆಲೆಗೊಳ್ಳಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಮೈತ್ರಿ ಕೂಟದಲ್ಲಿ ಇತ್ತೀಚಿನ ಸಮಸ್ಯೆಗಳು ನಿರೀಕ್ಷಿತವಾಗಿರುವಂಥವೇ ಆಗಿವೆ’ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆಯೂ ಆಗಿರುವ ಮೆಹಬೂಬಾ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಗುಪ್ಕಾರ್ ಮೈತ್ರಿಕೂಟದಲ್ಲಿದ್ದ ಪೀಪಲ್ಸ್ ಕಾನ್ಫರೆನ್ಸ್ ಮೈತ್ರಿಕೂಟದಿಂದ ನಿರ್ಗಮಿಸಿದ ಹಿನ್ನೆಲೆಯಲ್ಲಿ ಪಕ್ಷದ ಕೆಲವರಿಂದ ನ್ಯಾಷನಲ್ ಕಾನ್ಫರೆನ್ಸ್‌ ಜೊತೆಗಿನ ಪಿಡಿಪಿಯ ಸಂಬಂಧವನ್ನು ಕೂಡ ಮರುಪರಿಶೀಲಿಸಬೇಕು’ ಎನ್ನುವ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮೆಹಬೂಬಾ ಪ್ರತಿಕ್ರಿಯಿಸಿದ್ದಾರೆ.

2020ರ ಅಕ್ಟೋಬರ್ ವೇಳೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಪೀಪಲ್ಸ್ ಕಾನ್ಫರೆನ್ಸ್‌, ಸಿಪಿಎಂ, ಸಿಪಿಐ, ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಜೆಕೆಪಿಎಂ ಜತೆಗೂಡಿ ಗುಪ್ಕಾರ ಮೈತ್ರಿಕೂಟವು ರಚನೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.