ADVERTISEMENT

ಕೇಂದ್ರದ ಲಸಿಕೆಯಿಂದ 2 ವರ್ಗದ ನಾಗರಿಕರ ಸೃಷ್ಟಿ: ಕೇರಳ ಹೈಕೋರ್ಟ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 14:35 IST
Last Updated 2 ನವೆಂಬರ್ 2021, 14:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಚ್ಚಿ: ‘ಕೇಂದ್ರದ ಲಸಿಕಾ ಯೋಜನೆಯು ದೇಶದಲ್ಲಿ ಎರಡು ವರ್ಗದ ನಾಗರಿಕರನ್ನು ಸೃಷ್ಟಿಸಿದೆ. ಒಂದು ವರ್ಗ ಕೋವ್ಯಾಕ್ಸಿನ್‌ ಪಡೆದವರು, ಅವರ ಚಲನವಲನ ನಿರ್ಬಂಧಿಸಲಾಗಿದೆ. ಇನ್ನೊಂದು ವರ್ಗ ಕೋವಿಶೀಲ್ಡ್‌ ಪಡೆದವರು, ಇವರು ಎಲ್ಲಿ ಬೇಕಾದರೂ ಹೋಗಬಹುದು’ ಎಂದು ಕೇರಳ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಕೆಲಸಕ್ಕಾಗಿ ವಿದೇಶಕ್ಕೆ ತೆರಳಲು ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಲಸಿಕೆಯ ಮೂರನೇ ಡೋಸ್‌ ಪಡೆಯಲು ಅವಕಾಶ ನೀಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ವಿಚಾರಣೆ ನಡೆಸಿದರು.

ಸೌದಿ ಅರೇಬಿಯಾದಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಕಿಸಿಕೊಂಡಿರುವ ಎರಡು ಡೋಸ್ ಕೋವ್ಯಾಕ್ಸಿನ್‌ ಲಸಿಕೆಯನ್ನು ಗಲ್ಫ್ ರಾಷ್ಟ್ರದಲ್ಲಿ ಪರಿಗಣಿಸುತ್ತಿಲ್ಲ. ಅಂತರರಾಷ್ಟ್ರೀಯ ಮಾನ್ಯತೆಯ ಲಸಿಕೆ ಹಾಕಿಸಿಕೊಳ್ಳದೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಅವರು ಅಲ್ಲಿ ತಮ್ಮ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದು, ಮೂರನೇ ಡೋಸ್ ಲಸಿಕೆ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ADVERTISEMENT

‘ಸರ್ಕಾರದ ಲಸಿಕೆಯಿಂದ ನಾಗರಿಕರು ಬಳಲುತ್ತಿದ್ದಾರೆ. ಎರಡು ವರ್ಗದ ನಾಗರಿಕರ ಸೃಷ್ಟಿಯು ಅರ್ಜಿದಾರರ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯ ಪ್ರಕರಣವಾಗಿದೆ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

‘ಅರ್ಜಿದಾರರಿಗೆ ಮೂರನೇ ಡೋಸ್‌ ಲಸಿಕೆ ನೀಡಬೇಕೆಂದು ತಾನು ಆದೇಶಿಸುವುದಿಲ್ಲ. ಆದರೆ, ಒಂದು ತಿಂಗಳೊಳಗೆ ಅವರ ಕುಂದುಕೊರತೆಗಳನ್ನು ಪರಿಹರಿಸಲು ಕೇಂದ್ರಕ್ಕೆ ನಿರ್ದೇಶಿಸುತ್ತೇನೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.

‘ಕೇಂದ್ರವು ನಿರ್ಧಾರ ತೆಗೆದುಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಲು ಬಯಸಿದರೆ, ಅರ್ಜಿದಾರರಿಗೆ ವಿದೇಶದಲ್ಲಿ ಕೆಲಸ ಮಾಡುವಾಗ ಸಂಬಳವಾಗಿ ಪಡೆಯುತ್ತಿದ್ದ ಮೊತ್ತವನ್ನು ಪಾವತಿಸಲು ನಿರ್ದೇಶನ ನೀಡಬೇಕಾಗುತ್ತದೆ. ನ್ಯಾಯಾಲಯವು ಕೇವಲ ಪ್ರೇಕ್ಷಕರಂತೆ ಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.

ಕೋರ್ಟ್‌ ಅಭಿಪ್ರಾಯದ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯವು ನ.5ರಂದು ವಿಷಯ ಪಟ್ಟಿ ಮಾಡಿದೆ. ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರವು ನ್ಯಾಯಾಲಯಕ್ಕೆ ಇದೇ ರೀತಿಯ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಈ ವಿಷಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ಹೇಳಿದೆ.

ಕೋವಿಡ್ ಲಸಿಕೆಯ ಮೂರನೇ ಡೋಸ್ ಪರಿಣಾಮಕಾರಿತ್ವ ಖಚಿತಪಡಿಸಿಕೊಳ್ಳಲು ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಇದು ಪೂರ್ಣಗೊಳ್ಳಲು ಹಲವು ತಿಂಗಳುಗಳು ಬೇಕಾಗುತ್ತದೆ ಎಂದು ಕೇಂದ್ರವು ಆಗಸ್ಟ್‌ನಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.