
ನರೇಂದ್ರ ಮೋದಿ, ಜೈರಾಮ್ ರಮೇಶ್
ಕೃಪೆ: ಪಿಟಿಐ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಸ್ವಘೋಷಿತ ವಿಶ್ವಗುರು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯಕರ್ಶಿ ಜೈರಾಮ್ ರಮೇಶ್ ಕಾಲೆಳೆದಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಮೇಶ್, 'ಇದೇ ತಿಂಗಳು 22–23ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಜಿ20 ಶೃಂಗ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದಾರೆ. ಹಾಗಾಗಿ, ಸ್ವಘೋಷಿತ ವಿಶ್ವಗುರು ಸಮಾವೇಶಕ್ಕೆ ಖುದ್ದಾಗಿ ಹಾಜರಾಗುತ್ತಾರೆ ಎಂದು ನಾವು ಖಚಿತವಾಗಿ ಹೇಳಬಹುದು' ಎಂದಿದ್ದಾರೆ.
ಟ್ರಂಪ್ ಅವರು ಭಾರತ ಹಾಗೂ ಮೋದಿ ಕುರಿತು ಇತ್ತೀಚೆಗೆ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿತ್ತು.
ಮೋದಿ ಅವರಿಗೆ ಟ್ರಂಪ್ ಅವರನ್ನು ಕಂಡರೆ ಭಯ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
ಭಾರತ ಹಾಗೂ ಪಾಕಿಸ್ತಾನ ನಡುವೆ ಇದೇ ವರ್ಷ ಮೇ ತಿಂಗಳಲ್ಲಿ ಉಲ್ಬಣಿಸಿದ್ದ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾಗಿ ಮತ್ತು ವ್ಯಾಪಾರದ ಬೆದರಿಕೆಯೊಡ್ಡಿ ಕದನ ವಿರಾಮ ಘೋಷಿಸುವಂತೆ ಮಾಡಿದ್ದಾಗಿ ಟ್ರಂಪ್ ಅವರು ಹೇಳಿಕೊಂಡಿದ್ದರು. ಹಾಗೆಯೇ, ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸದಿದ್ದರೆ ಸುಂಕವನ್ನು ಮತ್ತಷ್ಟು ಏರಿಸುವುದಾಗಿ ಟ್ರಂಪ್ ಎಚ್ಚರಿಸಿದ್ದರು. ಅದಾದ ನಂತರ, ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಹೇಳಿದ್ದಾರೆ ಎಂದು ಘೋಷಿಸಿದ್ದರು.
ಈ ಹೇಳಿಕೆಗಳಿಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದ ರಾಹುಲ್ ಹಾಗೂ ಕಾಂಗ್ರೆಸ್ ನಾಯಕರು, ಪ್ರಧಾನಿ ಮೋದಿಗೆ ಟ್ರಂಪ್ ಅವರನ್ನು ಕಂಡರೆ ಭಯ ಎಂದು ತಿವಿದಿದ್ದರು.
ಅದೇ ರೀತಿಯಲ್ಲಿ ಇದೀಗ ಜೈರಾಮ್ ರಮೇಶ್ ಅವರು ಮೋದಿಯನ್ನು ಮೂದಲಿಸಿದ್ದಾರೆ.
ಮಲೇಷ್ಯಾದಲ್ಲಿ ಕಳೆದ ತಿಂಗಳು ಆಯೋಜನೆಗೊಂಡಿದ್ದ ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ASEAN) ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರಾಗಿದ್ದರು.
ಅಗಲೂ ಮೋದಿ ವಿರುದ್ಧ ಕುಹುಕವಾಡಿದ್ದ ರಮೇಶ್, 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಮೂಲೆಗುಂಪಾಗುವುದನ್ನು ತಪ್ಪಿಸಿಕೊಳ್ಳಲು ಪ್ರಧಾನಿ ಕಾರಣ ಕಂಡುಕೊಂಡಿದ್ದಾರೆ. ಟ್ರಂಪ್ ಅವರನ್ನು ನೇರವಾಗಿ ಭೇಟಿಯಾಗುವುದು ತೀರಾ ಅಪಾಯಕಾರಿ. ಹಾಗಾಗಿ ಸಭೆಗೆ ಹಾಜರಾಗದಿರಲು ಮೋದಿ ನಿರ್ಧರಿಸಿದ್ದಾರೆ. ಇದರಿಂದ, ವಿಶ್ವದ ವಿವಿಧ ರಾಷ್ಟ್ರಗಳ ನಾಯಕರನ್ನು ತಬ್ಬಿಕೊಂಡು, ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಹಾಗೂ ಜಾಗತಿಕ ವೇದಿಕೆಯಲ್ಲಿ 'ತಾನೊಬ್ಬ ವಿಶ್ವಗುರು' ಎಂದು ಹೇಳಿಕೊಳ್ಳುವ ಅವಕಾಶವನ್ನು ಕೈಚೆಲ್ಲಿದ್ದಾರೆ' ಎಂದು ವ್ಯಂಗ್ಯವಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.