
ಭಗವಂತ್ ಮಾನ್
(ಪಿಟಿಐ ಚಿತ್ರ)
ಚಂಡೀಗಢ: ಸಂವಿಧಾನದ 240ನೇ ವಿಧಿಯಡಿ ಚಂಡೀಗಢವನ್ನು ಸೇರಿಸಿ, ಅಲ್ಲಿಗೆ ರಾಷ್ಟ್ರಪತಿಯಿಂದ ಪ್ರತ್ಯೇಕ ಲೆಫ್ಟಿನೆಂಟ್ ಗವರ್ನರ್ ನೇಮಿಸುವ ಮಸೂದೆ ಜಾರಿಗೆ ತರುವ ಪ್ರಸ್ತಾವವನ್ನು ಎನ್ಡಿಎ ನೇತೃತ್ವ ಕೇಂದ್ರ ಸರ್ಕಾರ ಮುಂದಿಟ್ಟಿದೆ. ಸದ್ಯ ಚಂಡೀಗಢದಲ್ಲಿ ಪಂಜಾಬ್ ರಾಜ್ಯಪಾಲರೇ ಆಡಳಿತ ನಡೆಸುತ್ತಿದ್ದಾರೆ.
ಪ್ರಸ್ತಾವಿತ ಮಸೂದೆಯ ಬಗ್ಗೆ ಆಡಳಿತಾರೂಢ ಎಎಪಿ ಮತ್ತು ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದ್ದು, ತನ್ನ ಸ್ವಂತ ರಾಜಧಾನಿಯ ಮೇಲಿನ ಪಂಜಾಬ್ನ ಹಕ್ಕನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎಂದು ಹೇಳಿವೆ.
ರಾಜ್ಯಸಭೆಯ ವೆಬ್ಸೈಟ್ನ ಬುಲೆಟಿನ್ ಪ್ರಕಾರ, ಸಂವಿಧಾನ (131 ತಿದ್ದುಪಡಿ) ಮಸೂದೆ, 2025 ಅನ್ನು ಡಿಸೆಂಬರ್ 1, 2025 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲು ನಿರ್ಧರಿಸಲಾಗಿದೆ.
‘ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ತರುತ್ತಿರುವ ಪ್ರಸ್ತಾವಿತ ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಈ ತಿದ್ದುಪಡಿ ಪಂಜಾಬ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
‘ನಮ್ಮ ರಾಜ್ಯದ ಹಳ್ಳಿಗಳನ್ನು ಬೇರುಸಹಿತ ಕಿತ್ತುಹಾಕುವ ಮೂಲಕ ನಿರ್ಮಿಸಲಾದ ಕೇಂದ್ರಾಡಳಿತ ಪ್ರದೇಶವು ಪಂಜಾಬ್ಗೆ ಮಾತ್ರ ಸೇರಿದೆ. ನಮ್ಮ ಹಕ್ಕನ್ನು ನಾವು ಹಾಗೆ ಜಾರಿಕೊಳ್ಳಲು ಬಿಡುವುದಿಲ್ಲ. ಅದಕ್ಕಾಗಿ ನಾವು ಅಗತ್ಯವಿರುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಮಾನ್ ಹೇಳಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಎಲ್ಲಾ ಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿದ್ದಾರೆ. ಈ ಮಸೂದೆಯು ಪಂಜಾಬ್ನ ಸ್ವಂತ ರಾಜಧಾನಿಯ ಮೇಲಿನ ಐತಿಹಾಸಿಕ, ಸಾಂವಿಧಾನಿಕ ಮತ್ತು ಭಾವನಾತ್ಮಕ ಹಕ್ಕನ್ನು ದುರ್ಬಲಗೊಳಿಸುವ ಸ್ಪಷ್ಟ ಪ್ರಯತ್ನವಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.