ಡೆಹ್ರಾಡೂನ್: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಸ್ಥಾನಗಳು ಭಕ್ತರಿಗೆ ತೆರೆದಿದ್ದು, ಚಾರ್ಧಾಮ್ ಯಾತ್ರೆ ಮಂಗಳವಾರ ಆರಂಭಗೊಂಡಿದೆ.
ಸಾವಿರಾರುಭಕ್ತರ ಸಮ್ಮುಖದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ಪ್ರವೇಶ ದ್ವಾರವನ್ನುತೆರೆಯಲಾಯಿತು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
2019ರ ಬಳಿಕ ಕೋವಿಡ್ ನಿರ್ಬಂಧ ಇಲ್ಲದೆ ಯಾತ್ರೆ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಆದರೂ ದಿನನಿತ್ಯದ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ಗಂಗೋತ್ರಿಗೆ 7,000, ಯಮುನೋತ್ರಿಗೆ 4,000, ಕೇದರನಾಥಕ್ಕೆ 12,000 ಮತ್ತು ಬದರಿನಾಥಕ್ಕೆ 15,000 ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ.
ಗಂಗೋತ್ರಿ ಮತ್ತು ಯಮುನೋತ್ರಿ ಆರಂಭದೊಂದಿಗೆ ಚಾರ್ಧಾಮ್ ಯಾತ್ರೆಗೆ ಚಾಲನೆ ದೊರೆತಿದ್ದು, ಮೇ 6ಕ್ಕೆ ಕೇದರನಾಥ ಮತ್ತು ಮೇ 8ಕ್ಕೆ ಬದರಿನಾಥ ದೇವಸ್ಥಾನಗಳು ತೆರೆಯಲಿವೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಪತ್ನಿಯೊಂದಿಗೆ ಗಂಗೋತ್ರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.