ಸಾಂದರ್ಭಿಕ ಚಿತ್ರ
ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯ ಮುಂಗಾ ಗ್ರಾಮದ ಅರಣ್ಯದಲ್ಲಿ ಬುಧವಾರ ಭದ್ರತಾ ಪಡೆ ಮತ್ತು ನಕ್ಸಲರ ನಡುವಿನ ಎನ್ಕೌಂಟರ್ನಲ್ಲಿ ಒಬ್ಬ ನಕ್ಸಲ್ ಮೃತಪಟ್ದಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಈ ಪ್ರದೇಶದಲ್ಲಿ ನಕ್ಸಲರು ಅಳವಡಿಸಿದ್ದ ಕಚ್ಚಾಬಾಂಬ್ ಸ್ಫೋಟಗೊಂಡು ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಜಿಲ್ಲಾ ಮೀಸಲು ಪಡೆಯು (ಡಿಆರ್ಜಿ) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ. ಮಾವೋವಾದಿಗಳ ವಿಭಾಗೀಯ ಸಮಿತಿ ಸದಸ್ಯ ದಿನೇಶ್ ಮೊಡಿಯಂ, ಕಂಪನಿ ನಂ. 2 ಕಮಾಂಡರ್ ವೆಲ್ಲಾ ಸೇರಿ 30–40 ನಕ್ಸಲರು ಇರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಯುತ್ತಿತ್ತು ಎಂದು ಅವರು ಹೇಳಿದರು.
ಸ್ಥಳದಿಂದ ಒಬ್ಬ ನಕ್ಸಲನ ಮೃತದೇಹ, ಒಂದು 9 ಎಂ.ಎಂ ಪಿಸ್ತೂಲ್, ಕಚ್ಚಾ ಬಾಂಬ್ಗಳು, ಆರು ರಿಮೋಟ್ ಸ್ವಿಚ್ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.
ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಬಿಜೆಪಿ ಕಾರ್ಯಕರ್ತನನ್ನು ಪೊಲೀಸ್ ಮಾಹಿತಿದಾರನೆಂದು ಭಾವಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಇದರೊಂದಿಗೆ ಕಳೆದ ಏಳು ದಿನಗಳಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರಿಂದ ನಡೆದ ಐದನೇ ನಾಗರಿಕ ಹತ್ಯೆ ಇದಾಗಿದೆ.
ಈ ಘಟನೆಯು ಮಂಗಳವಾರ ರಾತ್ರಿ ಫರ್ಸೇಗಢ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಕುಡಿಯಾಮ್ ಮಾಡೋ (35) ಎಂದು ಗುರುತಿಸಲಾಗಿದೆ. ನಕ್ಸಲರ ಗುಂಪು ಮಾಡೋ ಅವರ ಮನೆಗೆ ನುಗ್ಗಿ ಅವರನ್ನು ಹೊರಗೆ ಎಳೆದುಕೊಂಡು ಹೋಗಿ ಕತ್ತು ಹಿಸುಕಿ ಕೊಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಕ್ಸಲರನ್ನು ಪತ್ತೆಹಚ್ಚಲು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.