ಚೆನ್ನೈ: ವಯಸ್ಸು ಎನ್ನುವುದು ಕೇವಲ ಸಂಖ್ಯೆಯಷ್ಟೇ ಎನ್ನುವ ಮಾತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಇಲ್ಲಿನ ನಿವಾಸಿ, 97 ವರ್ಷದ ಎ.ಕೃಷ್ಣಮೂರ್ತಿ ಗುಣಮುಖರಾಗಿ ನಗುಮೊಗದೊಂದಿಗೆ ಮನೆಗೆ ತೆರಳಿದ್ದಾರೆ.
ಕೋವಿಡ್–19ಗೆ ಒಳಗಾಗಿ ಗುಣಮುಖರಾದ ತಮಿಳುನಾಡಿನ ಅತ್ಯಂತ ಹಿರಿಯ ವ್ಯಕ್ತಿ ಇವರು ಎನ್ನಲಾಗಿದೆ. ಉದ್ವೇಗ, ಹೃದಯ ಸಂಬಂಧಿ ಕಾಯಿಲೆಯಿದ್ದ ಕೃಷ್ಣಮೂರ್ತಿ ಅವರಿಗೆ ಕೋವಿಡ್–19 ದೃಢಪಟ್ಟಿ ಕಾರಣದಿಂದಮೇ 30ರಂದು ಇಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆಗೆ ವಯಸ್ಸು ಅಡ್ಡಿಯಾಗಿದ್ದರೂ, ಆಸ್ಪತ್ರೆಯ ಸಿಬ್ಬಂದಿಯ ಪರಿಶ್ರಮದಿಂದ ಅವರು ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದಿದ್ದಾರೆ.
ಆಸ್ಪತ್ರೆಯಿಂದ ಮನೆಗೆ ತೆರಳುವ ಸಂದರ್ಭದಲ್ಲಿ ವೈದ್ಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಕೃಷ್ಣಮೂರ್ತಿ ಅವರಿಗೆ ಶುಭ ಕೋರಿದರು. ವ್ಹೀಲ್ಚೇರ್ನಲ್ಲಿ ಕುಳಿತಿದ್ದ ಕೃಷ್ಣಮೂರ್ತಿ ಸಿಬ್ಬಂದಿಯತ್ತ ನಗುತ್ತಾ ಕೈಬೀಸುವ ವಿಡಿಯೊವೊಂದನ್ನು ಆಸ್ಪತ್ರೆ ಬಿಡುಗಡೆಗೊಳಿಸಿದೆ. ತಮಿಳುನಾಡಿನಲ್ಲಿ ಸೋಂಕಿಗೆ 400ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಇಂಥ ಸಂದರ್ಭದಲ್ಲಿ ಕೃಷ್ಣಮೂರ್ತಿಯವರು ಗುಣಮುಖರಾಗಿರುವುದು ಹಲವು ರೋಗಿಗಳಲ್ಲಿ ಭರವಸೆ ಮೂಡಿಸಿದೆ.
‘ಕೋವಿಡ್–19ಗೆ ತುತ್ತಾದರೆ ಜೀವನವೇ ಮುಗಿಯಿತು ಎಂದಲ್ಲ. ನಿತ್ಯ ಸಾವಿರಾರು ಜನರು ಇದರ ವಿರುದ್ಧ ಹೋರಾಡಿ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ.ಕೃಷ್ಣಮೂರ್ತಿಯವರು ಗುಣಮುಖರಾಗಿರುವುದನ್ನು ಉದಾಹರಣೆಯಾಗಿ ಜನರು ನೋಡಬೇಕು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ನಮಗೇ ಅವರು ಸ್ಫೂರ್ತಿಯಾಗಿದ್ದರು. ಜೊತೆಗಿದ್ದ ರೋಗಿಗಳಿಗೆ ಭರವಸೆ ತುಂಬುತ್ತಿದ್ದರು. ರೋಗದ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಸಲಹೆ ನೀಡುತ್ತಿದ್ದರು’ ಎಂದು ಆಸ್ಪತ್ರೆಯ ಡಾ.ವಿಜಯಲಕ್ಷ್ಮಿ ಬಾಲಕೃಷ್ಣ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.