ದಾಂತೇವಾಡ: ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಸೋಮವಾರ ಎಂಟು ಮಂದಿ ನಕ್ಸಲರು ಶರಣಾಗಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಆರಂಭಿಸಿದ ‘ಲೋಣ್ ವಾರತು’ ಅಭಿಯಾನವು ಉತ್ತಮ ಫಲಿತಾಂಶವನ್ನು ನೀಡುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದರು.
‘ಈ ಅಭಿಯಾನ ಆರಂಭವಾದ ಬಳಿಕ ದಾಂತೇವಾಡ ಜಿಲ್ಲೆಯಲ್ಲಿ ಒಟ್ಟು 248 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ‘ಲೋಣ್ ವಾರತು’ (ಮರಳಿ ಮನೆಗೆ)ಅಭಿಯಾನವನ್ನು ಪ್ರಾರಂಭಿಸಲಾಗಿತ್ತು’ ಎಂದು ಅಧಿಕಾರಿಗಳು ಹೇಳಿದರು.
‘ಮಹಿಳೆ ಸೇರಿದಂತೆ 8 ನಕ್ಸಲರು ಮಾವೋವಾದಿಗಳ ತತ್ವಗಳಿಂದ ಬೇಸರಗೊಂಡು ಪೊಲೀಸರಿಗೆ ಶರಣಾಗಿದ್ದಾರೆ. ಈ ನಕ್ಸಲರು ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರ ಮತ್ತು ನಾಗರಿಕರ ಮೇಲೆ ದಾಳಿ, ಸರ್ಕಾರಿ ಆಸ್ತಿಗೆ ಹಾನಿ, ಬಾಂಬ್ ಸ್ಪೋಟ ಸೇರಿದಂತೆ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದರು’ ಎಂದು ಅವರು ತಿಳಿಸಿದರು.
‘ಸದ್ಯ ಅವರಿಗೆ ತಲಾ ₹10,000 ನೀಡಲಾಯಿತು. ಬಳಿಕ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಹೆಚ್ಚಿನ ಸಹಾಯವನ್ನು ನೀಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.