ADVERTISEMENT

ನಕ್ಸಲ್‌ಪೀಡಿತ ಪ್ರದೇಶಗಳಿಂದ ‌ಭದ್ರತಾ ಪಡೆಗಳ ಹಿಂತೆಗೆತ ಇಲ್ಲ: ಭೂಪೇಶ್‌ ಬಘೇಲ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 16:28 IST
Last Updated 23 ಡಿಸೆಂಬರ್ 2018, 16:28 IST
ಭೂಪೇಶ್‌ ಬಘೇಲ
ಭೂಪೇಶ್‌ ಬಘೇಲ   

ರಾಯಪುರ:ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದು ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ ಹೇಳಿದ್ದಾರೆ.

ನಕ್ಸಲ್‌ ಪೀಡಿತ ಪ್ರದೇಶಗಳ ನಿವಾಸಿಗಳೊಂದಿಗೆ ಮಾತುಕತೆಗೆ ಒಲವು ವ್ಯಕ್ತಪಡಿಸಿರುವ ನೂತನ ಮುಖ್ಯಮಂತ್ರಿ, ಭದ್ರತಾ ಪಡೆಗಳನ್ನು ನಿಯೋಜಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

‘ಗುಂಡು ತುಂಬಿದ ಬಂದೂಕನ್ನು ಮುಂದಿಟ್ಟುಕೊಂಡು ನಕ್ಸಲ್‌ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಬಂದೂಕು ತೋರಿಸಿ ಪರಿಹಾರ ಕಂಡುಹಿಡಿಯಲು ಮುಂದಾಯಿತು. ಪರಿಣಾಮ, ರಾಜ್ಯದ ಮೂರು ಬ್ಲಾಕ್‌ಗಳಲ್ಲಿ ಕ್ರಿಯಾಶೀಲರಾಗಿದ್ದ ನಕ್ಸಲರು, ಸದ್ಯ 15 ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ನಕ್ಸಲ್‌ ಪೀಡಿತ ಪ್ರದೇಶಗಳ ಜನರು, ಮುಖ್ಯವಾಗಿ ಬುಡಕಟ್ಟು ಜನಾಂಗದವರೊಂದಿಗೆ ಮಾತುಕತೆ ನಡೆಸಬೇಕು. ನಂತರ, ಇತರ ಸಮುದಾಯಗಳೊಂದಿಗೆ, ವ್ಯಾಪಾರಿಗಳು, ಪೊಲೀಸರು, ಅರೆಭದ್ರತಾ ಪಡೆಗಳು, ಸಾಮಾಜಿಕ ಗುಂಪುಗಳು, ಪತ್ರಕರ್ತರು, ಬುದ್ಧಿಜೀವಿಗಳೊಂದಿಗೆ ಚರ್ಚೆ ನಡೆಸಿ ನಕ್ಸಲ್‌ ಸಮಸ್ಯೆಗೆ ನಿಶ್ಚಿತ
ಪರಿಹಾರ ಕಂಡುಹಿಡಿಯಬೇಕಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.