
ನವದೆಹಲಿ: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ₹2,800 ಕೋಟಿ ಮೊತ್ತದ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಢದ ಅಬಕಾರಿ ಇಲಾಖೆಯ ನಿವೃತ್ತ ಆಯುಕ್ತ ನಿರಂಜನ್ ದಾಸ್ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸೇರಿದ ₹100 ಕೋಟಿಗೂ ಅಧಿಕ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಮಂಗಳವಾರ ತಿಳಿಸಿದೆ.
2019ರಿಂದ 2023ರ ಅವಧಿಯಲ್ಲಿ ಛತ್ತೀಸಗಢದ ಅಬಕಾರಿ ಇಲಾಖೆಯನ್ನು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದು, ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಸೇರಿಕೊಂಡು ಕ್ರಿಮಿನಲ್ ಸಿಂಡಿಕೇಟ್ ರಚಿಸಿದ್ದರು ಎಂದು ಇ.ಡಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಐಷಾರಾಮಿ ಬಂಗ್ಲೆ, ಫ್ಲ್ಯಾಟ್, ವಾಣಿಜ್ಯ ಕಟ್ಟಡಗಳು, ಕೃಷಿ ಭೂಮಿ ಹಾಗೂ ಜೀವವಿಮೆ, ಷೇರು, ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಸೇರಿದಂತೆ ಹಲವು ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡಿದ 197 ದಾಖಲೆ ಪತ್ರಗಳನ್ನು ತಾತ್ಕಲಿಕವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಇ.ಡಿ ತಿಳಿಸಿದೆ.
ಇದರಲ್ಲಿ ಐಎಎಸ್ ಅಧಿಕಾರಿ ನಿರಂಜನ್ ದಾಸ್ಗೆ ಸೇರಿದ ₹38.21 ಕೋಟಿ ಆಸ್ತಿ ಸೇರಿದ್ದರೆ, ಉಳಿದವು ಅಬಕಾರಿ ಇಲಾಖೆಯ ಇತರೆ ಅಧಿಕಾರಿಗಳಿಗೆ ಸೇರಿದ 30 ಆಸ್ತಿಗಳಾಗಿವೆ ಎಂದು ಇ.ಡಿಯು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.