ADVERTISEMENT

ಕೋವಿಡ್‌ ಲಸಿಕೆ ಕೊರತೆ: ಕೇಂದ್ರದ ವಿರುದ್ಧ ಪಿ. ಚಿದಂಬರಂ ವಾಗ್ದಾಳಿ

ಪಿಟಿಐ
Published 13 ಜುಲೈ 2021, 8:19 IST
Last Updated 13 ಜುಲೈ 2021, 8:19 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ’ಒಡಿಶಾ, ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ಕೊರತೆ ಉಂಟಾಗಿದ್ದು, ಕೇಂದ್ರ ಸರ್ಕಾರ ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲ ವಯಸ್ಕರಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡುತ್ತೇವೆಂದು ಸುಳ್ಳು ಭರವಸೆ ನೀಡುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ, ’ಒಡಿಶಾ ಮತ್ತು ದೆಹಲಿಯಲ್ಲಿ ಕೋವಿಡ್‌ ಲಸಿಕೆಗಳ ಕೊರತೆಯಾಗಿದ್ದು, ಕೇಂದ್ರದನೂತನ ಆರೋಗ್ಯ ಸಚಿವರು, ದೇಶದ ಎಲ್ಲ ರಾಜ್ಯಗಳಿಗೆ ಯಾವುದೇ ಅಡೆತಡೆಯಿಲ್ಲದೇ ಲಸಿಕೆ ಪೂರೈಸಲು ಯಾವ ರೀತಿ ಯೋಜನೆ ರೂಪಿಸಿದ್ದಾರೆ ಎಂಬುದನ್ನು ತಿಳಿಸುತ್ತಾರೆಯೇ’ ಎಂದು ಅವರು ಕೇಳಿದ್ದಾರೆ.

’ದೇಶದಲ್ಲಿ ಲಸಿಕೆ ಕೊರತೆಯಾಗಿದೆ ಎಂಬುದು ಸತ್ಯ. ಲಸಿಕೆ ಉತ್ಪಾದನೆಯನ್ನು ಉತ್ಪ್ರೇಕ್ಷೆ ಮಾಡಲಾಗುತ್ತಿದೆ. ಲಸಿಕೆ ಆಮದು ಮಾಡಿಕೊಳ್ಳುವುದು ನಿಗೂಢವಾದ ವಿಷಯವಾಗಿದೆ. ಡಿಸೆಂಬರ್ 2021ರ ವೇಳೆಗೆ ದೇಶದಲ್ಲಿರುವ ವಯಸ್ಕರಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡುತ್ತೇವೆ ಎನ್ನುವುದು ಸುಳ್ಳು ಭರವಸೆ’ ಎಂದು ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ADVERTISEMENT

’ನೂತನ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯಾ ಅವರು ಲಸಿಕೆ ಕಾರ್ಯಕ್ರಮದ ಸತ್ಯಾಸತ್ಯತೆಯನ್ನು ದೇಶಕ್ಕೆ ತಿಳಿಸುತ್ತಾರೆಯೇ’ ಎಂದು ಚಿದಂಬರಂ ಕೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ’ಒಡಿಶಾ ಮತ್ತು ದೆಹಲಿಯಲ್ಲಿ ಲಸಿಕೆ ಕೊರತೆ ತೀವ್ರವಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

’ಒಡಿಶಾದ 30 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಲ್ಲಿ ಲಸಿಕೆ ಕೊರತೆ ಇದೆ. ಒಡಿಶಾದಲ್ಲಿ ಬಿಜೆಡಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದ್ದು, ಬಿಜೆಪಿ ಸರ್ಕಾರದ ಮಿತ್ರ ಪಕ್ಷವಾಗಿದೆ. ಲಸಿಕೆ ಕೊರತೆಯ ಕುರಿತ ದೂರನ್ನು ತಳ್ಳಿ ಹಾಕುವ ಕೇಂದ್ರ ಸರ್ಕಾರ, ಒಡಿಶಾ ಪರಿಸ್ಥಿತಿ ಕುರಿತು ಏನು ಹೇಳುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.