ADVERTISEMENT

ಮಕ್ಕಳ ಕಳ್ಳಸಾಗಣೆಯಿಂದ ಸಮಾಜದ ವ್ಯವಸ್ಥೆಗೂ ಧಕ್ಕೆ: ಬಾಂಬೆ ಹೈಕೋರ್ಟ್‌

ಪಿಟಿಐ
Published 20 ಮಾರ್ಚ್ 2023, 14:31 IST
Last Updated 20 ಮಾರ್ಚ್ 2023, 14:31 IST
..
..   

ಮುಂಬೈ: ಮಕ್ಕಳ ಕಳ್ಳಸಾಗಣೆ ಅತ್ಯಂತ ಗಂಭೀರ ಮತ್ತು ಘೋರ ಶೋಷಣೆಗಳಲ್ಲಿ ಒಂದಾಗಿದೆ. ಇದು ಮಗು ಮತ್ತು ಅದರ ಕುಟುಂಬದ ಮೇಲೆ ಪರಿಣಾಮ ಬೀರುವುದಲ್ಲದೆ, ಸಮಾಜದ ವ್ಯವಸ್ಥೆಗೂ ಧಕ್ಕೆ ಉಂಟು ಮಾಡುತ್ತದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಹತ್ತು ತಿಂಗಳ ಮಗು ಅಪಹರಣ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗೆ ಕೋರ್ಟ್‌ ಜಾಮೀನು ನಿರಾಕರಿಸಿದೆ.

2021ರ ಆಗಸ್ಟ್‌ನಲ್ಲಿ ಉಪನಗರ ಬಾಂದ್ರಾದ ಫುಟ್‌ಪಾತ್‌ನಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಅಪಹರಿಸಲಾಗಿತ್ತು. ಪೊಲೀಸರ ಪ್ರಕಾರ, ಆರೋಪಿ ಪರಂಡಮ್ ಗುಡೆಂಟಿ ಎಂಬಾತ ಮಗುವನ್ನು ತೆಲಂಗಾಣದ ಮಕ್ಕಳಿಲ್ಲದ ದಂಪತಿಗೆ ₹1.05 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ.

ADVERTISEMENT

ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರ ಏಕಸದಸ್ಯ ಪೀಠವು ಫುಟ್‌ಪಾತ್‌ ನಿವಾಸಿಗಳು, ವಿಶೇಷವಾಗಿ ಬೀದಿ ಮಕ್ಕಳು ಸಮಾಜದ ಅತ್ಯಂತ ದುರ್ಬಲ ವರ್ಗದವರಾಗಿದ್ದು, ಶೋಷಣೆಗೆ ಒಳಗಾಗುತ್ತಾರೆ ಎಂದು ಹೇಳಿದೆ.

ಅಪರಾಧದ ಗಂಭೀರತೆ ಪರಿಗಣಿಸಿ ಆರೋಪಿಗೆ ಜಾಮೀನು ನೀಡುವುದಿಲ್ಲ ಎಂದು ಹೇಳಿದೆ.

ಗುಡೆಂಟಿ ವಿರುದ್ಧ ಕ್ರಿಮಿನಲ್ ಪಿತೂರಿ, ಅಪಹರಣ, ಅಕ್ರಮ ಬಂಧನ ಮತ್ತು ಕಳ್ಳಸಾಗಣೆ ಆರೋಪಗಳ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಸಲ್ಲಿಸಿದ ಮಾಹಿತಿ ಪ್ರಕಾರ ಗುಡೆಂಟಿ ಮಕ್ಕಳ ಅಪಹರಣ ಮತ್ತು ಮಾರಾಟದ ದಂಧೆಯಲ್ಲಿ ಭಾಗಿಯಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.