ADVERTISEMENT

ಕಾಶ್ಮೀರ ವಿಷಯ ಅಂತರರಾಷ್ಟ್ರೀಯಗೊಳಿಸುವ ಪಾಕ್‌ ಯತ್ನ ವಿಫಲ: ಭಾರತ

ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿಯ ಕಾಯಂ ಪ್ರತಿನಿಧಿ ಪ್ರತಿಪಾದನೆ

ಪಿಟಿಐ
Published 6 ಆಗಸ್ಟ್ 2020, 6:18 IST
Last Updated 6 ಆಗಸ್ಟ್ 2020, 6:18 IST
.
.   

ವಿಶ್ವಸಂಸ್ಥೆ: ಚೀನಾದ ಬೆಂಬಲದೊಂದಿಗೆ ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆ ಮೂಲಕ ಅಂತರರಾಷ್ಟ್ರೀಯಗೊಳಿಸಲು ಪಾಕಿಸ್ತಾನ ನಡೆಸಿದ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದೆ.

ಪಾಕಿಸ್ತಾನದೊಂದಿಗೆ ಆಪ್ತ ಸಂಬಂಧ ಹೊಂದಿರುವ ಚೀನಾ, ಬುಧವಾರ ‘ಇತರ ಯಾವುದೇ ವಿಷಯಗಳು’ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯ ಚರ್ಚಿಸಲು ಭದ್ರತಾ ಮಂಡಳಿಯ ಸಭೆಯನ್ನು ಕರೆದಿತ್ತು.

‘ಚೀನಾ ಕರೆದಿದ್ದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಈ ವಿಷಯದ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳಲಿಲ್ಲ. ಜಮ್ಮು ಮತ್ತು ಕಾಶ್ಮೀರ ವಿಷಯ ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಷಯವಾಗಿದೆ. ಹೀಗಾಗಿ, ಈ ವಿಷಯದ ಚರ್ಚೆಗೆ ಸಮಯ ಮೀಸಲಿಡುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಭದ್ರತಾ ಮಂಡಳಿಯ ಹಲವು ಸದಸ್ಯರು ಪ್ರತಿಪಾದಿಸಿದರು’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿಯ ಕಾಯಂ ಪ್ರತಿನಿಧಿ ಟಿ.ಎಸ್‌. ತ್ರಿಮೂರ್ತಿ ತಿಳಿಸಿದ್ದಾರೆ.

ADVERTISEMENT

‘ಇದೊಂದು ಅನೌಪಚಾರಿಕ ಸಭೆಯಾಗಿತ್ತು. ಯಾವುದೇ ವಿಷಯಗಳನ್ನು ದಾಖಲಿಸಲಿಲ್ಲ ಮತ್ತು ನಿರ್ಣಯಗಳನ್ನು ಕೈಗೊಳ್ಳಲಿಲ್ಲ’ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಮಂಡಿಸಿದ ಪ್ರಸ್ತಾವಕ್ಕೆ ಅಮೆರಿಕ ಮೊದಲು ವಿರೋಧ ವ್ಯಕ್ತಪಡಿಸಿತು. ಬಳಿಕ ಇತರ ರಾಷ್ಟ್ರಗಳು ಬೆಂಬಲಿಸಿ ದನಿಗೂಡಿಸಿದವು ಎಂದು ಮೂಲಗಳು ತಿಳಿಸಿವೆ.

ಕಳೆದ ಜನವರಿ ತಿಂಗಳಲ್ಲೂ ಪಾಕಿಸ್ತಾನದ ಪರವಾಗಿ ಚೀನಾ, ‘ಇತರ ವಿಷಯಗಳ ಅಡಿಯಲ್ಲಿ’ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲು ಇದೇ ರೀತಿಯ ಅವಕಾಶ ಮಾಡಿಕೊಟ್ಟಿತ್ತು. ಆ ಸಂದರ್ಭದಲ್ಲೂ ಚೀನಾಗೆ ಯಾವ ರಾಷ್ಟ್ರಗಳು ಬೆಂಬಲಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.