ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿರುವುದಕ್ಕೆ ಚೀನಾಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದೆ.
ಚೀನೀ ಸರ್ಕಾರ ಈ ಪ್ರದೇಶವನ್ನು ಎಂದಿಗೂ ಈಶಾನ್ಯ ಭಾರತದ ರಾಜ್ಯ ಎಂದು ಒಪ್ಪಿಕೊಳ್ಳುವುದಿಲ್ಲ, ಬದಲಿಗೆ ಅದು ದಕ್ಷಿಣ ಟಿಬೆಟ್ನ ಭಾಗ ಎಂದೇ ಪ್ರತಿಪಾದಿಸುತ್ತದೆ ಎಂದು ಹೇಳಿದೆ.
ಚೀನಾದ ಗಡಿಯಲ್ಲಿರುವ ಪ್ರದೇಶದಲ್ಲಿ ನಾಗರಿಕ- ಮಿಲಿಟರಿ ಸ್ನೇಹ ಹೆಚ್ಚಿಸಲು ‘ಮೈತ್ರಿ ದಿವಸ್’ ಕಾರ್ಯಕ್ರಮ ಆಚರಣೆಗೆಗಾಗಿ ರಕ್ಷಣಾ ಸಚಿವರು ಗುರುವಾರ ತವಾಂಗ್ಗೆ ಭೇಟಿ ನೀಡಿದ್ದರು.
ಈ ಪ್ರದೇಶದಲ್ಲಿ ಭಾರತದ ನಾಯಕರು ಮತ್ತು ಅಧಿಕಾರಿಗಳು ನಡೆಸುವ ಚಟುವಟಿಕೆಗಳನ್ನು ತೀವ್ರವಾಗಿ ಖಂಡಿಸುವುದಾಗಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಪ್ರತಿಕ್ರಿಯಿಸಿದ್ದಾರೆ.
ಎರಡೂ ದೇಶಗಳ ನಡುವಿನ 3,488 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಒಳಗೊಂಡ ಗಡಿ ವಿವಾದವನ್ನು ಬಗೆಹರಿಸಲು ಉಭಯ ದೇಶಗಳು ಈವರೆಗೆ 21 ಸುತ್ತಿನ ಮಾತುಕತೆ ನಡೆಸಿವೆ.
ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಭಾಗ ಎಂದು ಭಾರತದ ಪ್ರತಿಪಾದಿಸಿದೆ. ಭಾರತೀಯ ನಾಯಕರು ದೇಶದ ಇತರ ಭಾಗಗಳಿಗೆ ಭೇಟಿ ನೀಡುವಂತೆ ಈ ರಾಜ್ಯಕ್ಕೂ ಕಾಲ ಕಾಲಕ್ಕೆ ಭೇಟಿ ನೀಡುತ್ತಿರುತ್ತಾರೆ ಎಂದು ಸಮರ್ಥಿಸಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.