ADVERTISEMENT

ಭಾರತದ ಮೇಲೆ ಚೀನಾ ಹಲವು ನಿರ್ಬಂಧ: ಕೇಂದ್ರ ಸರ್ಕಾರದ ಮೌನ ಪ್ರಶ್ನಿಸಿದ ಖರ್ಗೆ

ಪಿಟಿಐ
Published 3 ಜುಲೈ 2025, 10:55 IST
Last Updated 3 ಜುಲೈ 2025, 10:55 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ನವದೆಹಲಿ: ಭಾರತದ ಉತ್ಪಾದನಾ ಘಟಕಗಳನ್ನು ಚೀನಾದ ಎಂಜಿನಿಯರ್‌ಗಳು ತೊರೆಯುತ್ತಿರುವುದು ಹಾಗೂ ಅಪರೂಪದ ಲೋಹಗಳ ರಫ್ತಿನ ಮೇಲೆ ಚೀನಾ ವಿಧಿಸುತ್ತಿರುವ ನಿರ್ಬಂಧವನ್ನು ಉಲ್ಲೇಖಿಸಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶೇಷ ರಸಗೊಬ್ಬರಗಳ ರಫ್ತಿನ ಮೇಲೆ ಚೀನಾ ಹೇರಿರುವ ನಿರ್ಬಂಧದ ಬಗ್ಗೆ ಸರ್ಕಾರ ಮೌನವಾಗಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ನರೇಂದ್ರ ಮೋದಿಯವರೇ, ವರದಿಗಳ ಪ್ರಕಾರ ಭಾರತದ ಉತ್ಪಾದನಾ ವಲಯದಿಂದ ಚೀನಾ ತನ್ನ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚೀನಾದ ಕಂಪನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಲು ಡೋಕ್ಲಾಂ ಹಾಗೂ ಗಲ್ವಾನ್‌ ಅನ್ನು ಮರೆಯಲಾಯಿತು. ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆ (ಪಿಎಲ್‌ಐ) ಯೋಜನೆಯ ಲಾಭ ಪಡೆಯಲು ಚೀನಾ ನಾಗರಿಕರಿಗೆ ಸುಲಭವಾಗಿ ವಿಸಾ ನೀಡಲಾಯಿತು ಎನ್ನುವುದು ನಿಜವಲ್ಲವೇ?’ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಖರ್ಗೆ ಪ್ರಶ್ನಿಸಿದ್ದಾರೆ.

ದಕ್ಷಿಣ ಭಾರತದ ಐಫೋನ್ ತಯಾರಿಕಾ ಘಟಕವನ್ನು ಚೀನಾದ ಎಂಜಿನಿಯರ್‌ಗಳು ತೊರೆಯುತ್ತಿರುವ ವರದಿಯನ್ನು ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ.

ಅಟೋಮೊಬೈಲ್, ಇ.ವಿ, ರಕ್ಷಣೆ ಹಾಗೂ ಭಾರಿ ಭದ್ರತೆ ಇರುವ ಕರೆನ್ಸಿಗಳ ಮುದ್ರಣಕ್ಕೆ ಅತಿ ಅಗತ್ಯವಿರುವ ಅಪರೂಪದ ಲೋಹಗಳನ್ನು ಭಾರತಕ್ಕೆ ರಫ್ತು ಮಾಡಲು ಚೀನಾ ನಿರ್ಬಂಧ ಹೇರಿರುವುದನ್ನು ಪ್ತಸ್ತಾಪಿಸಿರುವ ಅವರು, ‘ಮೋದಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಚೀನಾದ ಅಧಿಕಾರಿಗಳನ್ನು ಅಧಿಕೃತವಾಗಿ ನೇಮಕ ಮಾಡಿಲ್ಲ ಎನ್ನುವುದು ಸತ್ಯವಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಬೇರೆ ರಾಷ್ಟ್ರಗಳಿಗೆ ಯಾವುದೇ ನಿರ್ಬಂಧ ಹೇರದಿದ್ದರೂ ಕಳೆದೆರಡು ತಿಂಗಳಿನಿಂದ ಭಾರತಕ್ಕೆ ಚೀನಾ ರಸಗೊಬ್ಬರ ಪೂರೈಕೆ ಮಾಡುತ್ತಿಲ್ಲ ಎಂದಿರುವ ಅವರು, ಭಾರತವು ಚೀನಾದಿಂದ ಶೇ 80ರಷ್ಟು ವಿಶೇಷ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತದೆ. ಇವುಗಳು ಹಣ್ಣು, ತರಕಾರಿ ಹಾಗೂ ಇನ್ನಿತರ ಲಾಭದಾಯಕ ಕೃಷಿಗಳ ಇಳುವರಿ ಹೆಚ್ಚಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಚೀನಾದ ಈ ನಡೆ ಈಗಾಗಲೇ ಡಿಎಪಿ ಹಾಗೂ ಯೂರಿಯಾದ ಕೊರತೆ ಎದುರಿಸುತ್ತಿರುವ ರೈತರಿಗೆ ಇನ್ನಷ್ಟು ಹಾನಿಮಾಡುವುದಿಲ್ಲವೇ? ಎಂದು ಕೇಳಿದ್ದಾರೆ.

‘ನಿಮ್ಮ ಸರ್ಕಾರದ ಚೀನಾ ಗ್ಯಾರಂಟಿಗೆ ಯಾವುದೇ ಎಕ್ಸ್‌ಪೈರಿ ದಿನಾಂಕ ಇಲ್ಲ. ಗಲ್ವಾನ್‌ನಲ್ಲಿ 20 ವೀರ ಯೋಧರ ಬಲಿದಾನದ ಬಳಿಕವೂ ನೀವು ಚೀನಾಗೆ ಕ್ಲಿನ್ ಚಿಟ್ ನೀಡಿದ್ದೀರಿ. ಇಂದು ಚೀನಾ ಅದರ ಪೂರ್ಣ ಲಾಭ ಪಡೆಯುತ್ತಿದೆ. ನಾವು ಅಸಹಾಯಕರಾಗಿ ನೋಡುತ್ತಿದ್ದೇವೆ’ ಎಂದು ಚಾಟಿ ಬೀಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.