
ಕನ್ಹಯ್ಯಲಾಲ್ ಖತಿಕ್
ಫೇಸ್ಬುಕ್ ಚಿತ್ರ
ಚಿತ್ತೋರಗಢ: ಸದಾ ಮೈಮೇಲೆ ಚಿನ್ನದ ಆಭರಣಗಳನ್ನು ಧರಿಸುವುದರಿಂದಲೇ ಪ್ರಸಿದ್ಧಿ ಪಡೆದಿರುವ ರಾಜಸ್ಥಾನದ ಚಿತ್ತೋರಗಢದ ಹಣ್ಣಿನ ವ್ಯಾಪಾರಿ ಕನ್ಹಯ್ಯಲಾಲ್ ಖತಿಕ್ ಎಂಬುವವರಿಗೆ ₹5 ಕೋಟಿ ನೀಡುವಂತೆ ಬೆದರಿಕೆ ಕರೆ ಬಂದಿದೆ.
ಕರೆ ಮಾಡಿದವರು ಗ್ಯಾಂಗ್ಸ್ಟರ್ ರೋಹಿತ್ ಗೋದರಾ ಗ್ಯಾಂಗಿನವರು ಎಂದು ಹೇಳಿರುವುದಾಗಿ ವರದಿಯಾಗಿದೆ.
ಖತಿಕ್ ಅವರಿಗೆ ಚಿನ್ನದ ಮೇಲಿರುವ ಪ್ರೀತಿಗಾಗಿ ‘ಚಿತ್ತೋರಗಢದ ಬಪ್ಪಿ ಲಹಿರಿ’ ಎಂದೂ ಕರೆಯುವುದುಂಟು. ಎರಡು ದಿನದ ಹಿಂದೆ ಮಿಸ್ಡ್ ಕಾಲ್ ಬಂದಿತ್ತು. ನಂತರ ವಾಟ್ಸ್ಆ್ಯಪ್ ಮೂಲಕ ಅದೇ ಸಂಖ್ಯೆಯಿಂದ ಕರೆ ಬಂದಿತ್ತು. ಅವುಗಳನ್ನು ಸ್ವೀಕರಿಸದ ಖತಿಕ್ಗೆ ನಂತರ ಧ್ವನಿ ಸಂದೇಶ ಕಳುಹಿಸಲಾಗಿತ್ತು.
‘ಮುಂದೆ ಎಂದೂ ಚಿನ್ನವನ್ನು ಧರಿಸುವಂತಿಲ್ಲ. ಒಪ್ಪದಿದ್ದರೆ ₹5 ಕೋಟಿ ಪರಿಹಾರ ನೀಡಬೇಕು’ ಎಂದು ಬೆದರಿಕೆಯೊಡ್ಡಲಾಗಿತ್ತು. ಈ ಕುರಿತು ಖತಿಕ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
50 ವರ್ಷಗಳ ಹಿಂದೆ ತಳ್ಳು ಗಾಡಿ ಮೂಲಕ ತರಕಾರಿ ಹಣ್ಣು ಮಾರುತ್ತಿದ್ದ ಕನ್ಹಯ್ಯಲಾಲ್ ಖತಿಕ್ ಬಳಿ ಇಂದು ಬರೋಬ್ಬರಿ 3.5 ಕೆ.ಜಿ. ಚಿನ್ನವಿದೆ. ಇದರಿಂದಾಗಿಯೇ ಅವರನ್ನು ‘ಚಿತ್ತೋರಗಢದ ಚಿನ್ನದ ಮನುಷ್ಯ’ ಎಂದೇ ಕರೆಯಲಾಗುತ್ತದೆ.
ಹಂತ ಹಂತವಾಗಿ ಹಣ್ಣಿನ ವ್ಯಾಪಾರವನ್ನೇ ಮುಂದುವರಿಸಿದ ಖತಿಕ್ ಸೇಬು ಮಾರುತ್ತಲೇ ಚಿನ್ನದ ಮೋಹ ಹೆಚ್ಚಿಸಿಕೊಂಡವರು ಎಂದು ಎನ್ಡಿಟಿವಿ ವರದಿ ಮಾಡಿದೆ.
ಕನ್ಹಯ್ಯಲಾಲ್ ಖತಿಕ್
ಬಿಕಾನೆರ್ ಮೂಲದವನಾದ ಗೊದರಾ, ಕೆನಡಾದಲ್ಲಿ ನೆಲೆಸಿದ್ದಾರೆ ಎಂದೆನ್ನಲಾಗಿದೆ. ಈತನ ಮೇಲೆ ಭಾರತದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 32 ಪ್ರಕರಣಗಳಿವೆ. ರ್ಯಾಪರ್ ಸಿದ್ದು ಮೂಸೆವಾಲಾ ಕೊಲೆ ಪ್ರಕರಣವೂ ಅವುಗಳಲ್ಲಿ ಒಂದು. ಪವನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಪಾಸ್ಪೋರ್ಟ್ ಪಡೆದು 2022ರಲ್ಲಿ ಈತ ದೆಹಲಿಯಿಂದ ದುಬೈಗೆ ಪರಾರಿಯಾದ. ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.