ಈಶಾನ್ಯ ದೆಹಲಿಯಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆಯ ಪರ–ವಿರುದ್ಧ ಹೋರಾಟಗಾರರ ನಡುವೆನಡೆದ ಘರ್ಷಣೆಯಲ್ಲಿ ಮೃತಪಟ್ಟ ನಾಲ್ವರು ನಾಗರಿಕರ ದೇಹಗಳ ಮೇಲೆ ಗುಂಡೇಟಿನ ಕುರುಹುಗಳು ಪತ್ತೆಯಾಗಿವೆ.ಮೃತ ಪೊಲೀಸ್ ಹೆಡ್ಕಾನ್ಸ್ಟೆಬಲ್ ಸಾವಿಗೆ ಕಲ್ಲೇಟಿನಿಂದ ತಲೆಗೆ ಆದ ಗಾಯ ಕಾರಣ. ಗಾಯಗೊಂಡವರಲ್ಲಿಯೂ ಬಹುತೇಕರು ಗುಂಡೇಟು ತಿಂದಿದ್ದಾರೆ.
ಗಾಯಗೊಂಡವರ ನಿಖರ ಸಂಖ್ಯೆ ತಿಳಿಸಲು ಗುರು ತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಯ ವೈದ್ಯರಿಗೆ ಸಾಧ್ಯವಾಗಿಲ್ಲ. ಸೋಮವಾರ ರಾತ್ರಿಯವರೆಗೆ ಸುಮಾರು 57 ಗಾಯಾಳುಗಳನ್ನು ಕರೆತರಲಾಯಿತು. ಈ ಪೈಕಿ ಬಹುತೇಕರು ಚಿಂತಾಜನಕ ಸ್ಥಿತಿಯಲ್ಲಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.
ಬಹುತೇಕರ ಮೈಮೇಲೆ ಗುಂಡೇಟಿನ ಮತ್ತು ಕಲ್ಲೇಟಿನ ಗಾಯಗಳಿದ್ದವು. ಕೆಲವರಿಗೆಇರಿತದ ಗಾಯಗಳಾಗಿದ್ದವು. ಒಬ್ಬ ವ್ಯಕ್ತಿಗೆಪೆಟ್ರೋಲ್ ಬಾಂಬ್ನಿಂದ ತೀವ್ರ ಸುಟ್ಟಗಾಯಗಳಾಗಿವೆ.ಆಸ್ಪತ್ರೆ ಸುತ್ತಮುತ್ತಲೂ ಬಿಗಿಪಹರೆ ಹಾಕಲಾಗಿದೆ. ಕೇವಲ ಗಾಯಾಳುಗಳನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ ಎಂದು ವರದಿಗಳು ಹೇಳಿವೆ.
ಮೃತರ ಸಂಬಂಧಿಕರು ಶವ ಗುರುತಿಸಿ, ಅಗತ್ಯ ದಾಖಲೆಗಳಿಗೆ ಸಹಿಹಾಕಿದ ನಂತರ ಶವಪರೀಕ್ಷೆ ನಡೆಯಲಿದೆ. ನಂತರ ಅಧಿಕೃತವಾಗಿ ವೈದ್ಯರು ಸಾವಿನ ಕಾರಣ ಪ್ರಕಟಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.