ADVERTISEMENT

ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ; ಠಾಣೆಯಲ್ಲಿ ‘ಸಾವರ್ಕರ್‌ ಗೌರವ ಯಾತ್ರೆ’

ಪಿಟಿಐ
Published 2 ಏಪ್ರಿಲ್ 2023, 11:11 IST
Last Updated 2 ಏಪ್ರಿಲ್ 2023, 11:11 IST
ಮಹಾರಾಷ್ಟ್ರದ ಠಾಣೆಯಲ್ಲಿ ಭಾನುವಾರ ನಡೆದ ‘ಸಾವರ್ಕರ್‌ ಗೌರವ ಯಾತ್ರೆ’ಯಲ್ಲಿ ಕಂಡ ಸ್ತಬ್ಧಚಿತ್ರ –ಪಿಟಿಐ ಚಿತ್ರ
ಮಹಾರಾಷ್ಟ್ರದ ಠಾಣೆಯಲ್ಲಿ ಭಾನುವಾರ ನಡೆದ ‘ಸಾವರ್ಕರ್‌ ಗೌರವ ಯಾತ್ರೆ’ಯಲ್ಲಿ ಕಂಡ ಸ್ತಬ್ಧಚಿತ್ರ –ಪಿಟಿಐ ಚಿತ್ರ   

ಠಾಣೆ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿವೊಂದರಲ್ಲಿ ‘ನನ್ನ ಹೆಸರು ಸಾವರ್ಕರ್‌ ಅಲ್ಲ. ನನ್ನ ಹೆಸರು ಗಾಂಧಿ ಮತ್ತು ಗಾಂಧಿ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ’ ಎಂದು ಹೇಳಿದ್ದನ್ನು ವಿರೋಧಿಸಿ ‘ಸಾವರ್ಕರ್‌ ಗೌರವ ಯಾತ್ರೆ’ಯನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದಲ್ಲಿ, ಅವರ ಹುಟ್ಟೂರಾದ ಠಾಣೆಯಲ್ಲಿ ಭಾನುವಾರ ನಡೆಸಲಾಯಿತು.

ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ವಿರೋಧಿಸಿ ‘ಸಾವರ್ಕರ್‌ ಗೌರವ ಯಾತ್ರೆ’ಯನ್ನು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ನಡೆಸುವುದಾಗಿ ಬಿಜೆಪಿ–ಶಿವಸೇನಾ (ಶಿಂದೆ ಬಣ) ಮೈತ್ರಿ ಸರ್ಕಾರ ಕಳೆದ ತಿಂಗಳೇ ಘೋಷಿಸಿತ್ತು.

ಇಲ್ಲಿನ ರಾಮ್‌ ಗಣೇಶ್‌ ಗಡ್ಕರಿ ರಂಗಯತನ್‌ ಸಭಾಂಗಣದಿಂದ ಯಾತ್ರೆ ಆರಂಭಗೊಂಡಿತು. ಯಾತ್ರಾರ್ಥಿಗಳು ‘ನಾನು ಸಾವರ್ಕರ್‌’ ಎಂಬ ಬರಹವಿದ್ದ ಟೋಪಿಯನ್ನು ಧರಿಸಿದ್ದರು. ಸುಮಾರು 200 ಬೈಕುಗಳು ಹಾಗೂ 100 ಆಟೊರಿಕ್ಷಾಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು.

ADVERTISEMENT

ಬಣ್ಣ ಬಣ್ಣದ ಸೀರೆ ಉಟ್ಟಿದ್ದ ಮಹಿಳೆಯರು ಲೆಜಿಮ್‌ ಹಿಡಿದು ಯಾತ್ರೆಯಲ್ಲಿ ಭಾಗವಹಿಸಿದ್ದರು. ನಗರದೆಲ್ಲೆಡೆ ಸಾವರ್ಕರ್‌ ಫೋಟೊಗಳನ್ನು ಹಾಕಲಾಗಿತ್ತು. ಯಾತ್ರೆ ಸಾಗುತ್ತಿದ್ದಂತೆ ಯಾತ್ರಾರ್ಥಿಗಳ ಮೇಲೆ ಹೂಮಳೆಗರೆಯಲಾಯಿತು.

ಬಿಜೆಪಿ ಮುಖಂಡ ಡಾ. ವಿನಯ್‌ ಸಹಸ್ರಬುದ್ಧೆ, ಶಾಸಕ ಸಂಜಯ್‌ ಕೇಲ್ಕರ್‌, ಠಾಣೆ ಘಟಕದ ಬಿಜೆ‍ಪಿ ಅಧ್ಯಕ್ಷ ನಿರಂಜನ್‌ ದಾವ್ಕರ್‌, ಶಿವಸೇನಾ (ಶಿಂದೆ ಬಣ) ಶಾಸಕ ಪ್ರತಾಪ್‌ ಸರ್ನಾಯಕ್ ಸೇರಿದಂತೆ ಹಲವು ಮುಖಂಡರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.