ಕಲ್ಪಟ್ಟಾ (ವಯನಾಡು): ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ₹4 ಲಕ್ಷ ಮತ್ತು ಜಮೀನು ಕಳೆದುಕೊಂಡವರಿಗೆ ₹6 ಲಕ್ಷ ಪರಿಹಾರ ಧನ ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.ವಯನಾಡು ಜಿಲ್ಲೆಯ ಕಲ್ಪಟ್ಟಾದಲ್ಲಿ ನಡೆದ ಸಭೆಯಲ್ಲಿ ಕೇರಳಮುಖ್ಯಮಂತ್ರಿ ಪರಿಹಾರ ಧನ ಘೋಷಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಮಳೆಯಿಂದ ಪ್ರಾಣ ಕಳೆದುಕೊಂಡವರ ಕುಟುಂಬದ ಸದಸ್ಯರಿಗೆ ₹4 ಲಕ್ಷ ಮತ್ತು ಮನೆ, ಜಮೀನು ಕಳೆದುಕೊಂಡವರಿಗೆ ₹10 ಲಕ್ಷ ನೀಡಲಾಗುವುದು.ಕೇಂದ್ರ ಸರ್ಕಾರದಿಂದಲೂ ಸಹಾಯ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದುಹೇಳಿದ್ದಾರೆ.
ಶನಿವಾರ ಬೆಳಗ್ಗೆ 10.20ಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಪಿಣರಾಯಿ ರಸ್ತೆ ಮೂಲಕ ಕಲ್ಪಟ್ಟಾಕ್ಕೆ ಬಂದಿದ್ದರು.ಕಲ್ಪಟ್ಟಾ ಮುಂಡೇರಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಕೆಲವು ಕಾಲ ಕಳೆದ ಅವರು ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಿತಿ-ಗತಿ ಅವಲೋಕನ ಸಭೆ ನಡೆಸಿದ್ದಾರೆ.
ಇಡುಕ್ಕಿ ಚೆರುತೋಣಿಯಲ್ಲಿ ಕಡಿಮೆಯಾದನೀರಿನ ಮಟ್ಟ
ತೊಡುಪುಳ: ಇಡುಕ್ಕಿ ಚೆರುತೋಣಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಕಳೆದ 20 ಗಂಟೆಗಳಲ್ಲಿ ಒಂದು ಅಡಿಯಷ್ಟು ನೀರಿನ ಮಟ್ಟ ಕಡಿಮೆಯಾಗಿದೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ, ಮಳೆಯ ಪ್ರಮಾಣ ಕಡಿಮೆಯಾದರೆ ನಾಲ್ಕೈದು ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ.
ಕೇರಳ ಜನತೆಗೆ ಸಹಾಯ ಮಾಡಿ
ಪ್ರವಾಹದಿಂದ ಕಂಗೆಟ್ಟಿರುವ ಕೇರಳದ ಜನತೆಗೆ ಸಹಾಯ ಮಾಡುವಂತೆ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ಸಹಾಯ ಮಾಡಲಿಚ್ಛಿಸುವರು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಣ ಕಳುಹಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.