ಕೊಯಮತ್ತೂರು: ಸಹೋದ್ಯೋಗಿಯ ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಭಾರತೀಯ ವಾಯು ಪಡೆ (ಐಎಎಫ್) ಅಧಿಕಾರಿಯ ಪ್ರಕರಣವನ್ನು ವಾಯು ಪಡೆಗೆ ವಹಿಸಲಾಗಿದೆ.
ಕೊಯಮತ್ತೂರು ಐಎಎಫ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಸಂದರ್ಭದಲ್ಲಿ ಅಧಿಕಾರಿಯು ಅತ್ಯಾಚಾರ ಎಸಗಿರುವುದಾಗಿ ವಾಯು ಪಡೆಯ ಮಹಿಳಾ ಅಧಿಕಾರಿಯೊಬ್ಬರು ಆರೋಪಿಸಿದ್ದರು. ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಆರೋಪಿ ಅಧಿಕಾರಿಯನ್ನು ಬಂಧಿಸಲಾಗಿತ್ತು. ದೂರಿನ ನಂತರ ತನ್ನನ್ನು 'ಎರಡು ಬೆರಳು ಪರೀಕ್ಷೆ' ಎಂದೇ ಕರೆಯುವ ಜನನಾಂಗ ಪರೀಕ್ಷೆಗೆ ಒಳಪಡಿಸಿರುವುದಾಗಿ ಸಂತ್ರಸ್ತೆ ದೂರಿದ್ದಾರೆ. ಆ ರೀತಿಯ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೇ ನಿಷೇಧಿಸಿದೆ.
ಅತ್ಯಾಚಾರ ಆರೋಪದ ಮೇಲೆ ಸೆಪ್ಟೆಂಬರ್ 26ರಂದು ಫ್ಲೈಟ್ ಲೆಫ್ಟಿನೆಂಟ್ ಅಮಿತೇಶ್ ಹರ್ಮುಖ್ ಅವರನ್ನು ಕೊಯಮತ್ತೂರಿನ ಪೊಲೀಸರು ಬಂಧಿಸಿದ್ದರು.
ಸೆಪ್ಟೆಂಬರ್ 10ರಂದು ತನಗೆ ಪಾದದ ಕೀಲು ನೋವು ಬಂದಿದ್ದರಿಂದ ನೋವು ನಿವಾರಕ ಔಷಧಿ ತೆಗೆದುಕೊಂಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಅದೇ ದಿನ ರಾತ್ರಿ, ಸ್ನೇಹಿತರ ಗುಂಪಿನಲ್ಲಿ ಎರಡು ಡ್ರಿಂಕ್ಗಳನ್ನು ಕುಡಿದಿದ್ದಾರೆ. ಅದರಲ್ಲಿ ಆರೋಪಿಯು ಒಂದು ಗ್ಲಾಸ್ ಡ್ರಿಂಕ್ ತಂದು ಕೊಟ್ಟಿದ್ದರು. ನಾನು ಕೋಣೆಯಲ್ಲಿ ಮಂಪರು ಸ್ಥಿತಿಯಲ್ಲಿದ್ದಾಗ ಆರೋಪಿಯು ಪ್ರವೇಶಿಸಿ, ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.