ಜಾರ್ಖಂಡ್ನ ಬೊಕಾರೊ ಜಿಲ್ಲೆಯ ಲುಗು ಬೆಟ್ಟದಲ್ಲಿ ಸಿಆರ್ಪಿಎಫ್ನ ಕೋಬ್ರಾ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವುದು–ಪಿಟಿಐ ಚಿತ್ರ (ಸಂಗ್ರಹ ಚಿತ್ರ)
ಬಿಜಾಪುರ: ದೇಶದಲ್ಲಿ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ನಿರಂತರವಾಗಿ ದಿಟ್ಟ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾನಿರ್ದೇಶಕ ಜಿ.ಪಿ ಸಿಂಗ್ ಬುಧವಾರ ಹೇಳಿದ್ದಾರೆ.
2014ರಿಂದ ಪ್ರಾರಂಭಿಸಲಾದ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು 2019ರಿಂದ ತೀವ್ರಗೊಳಿಸಲಾಗಿದೆ. ನಕ್ಸಲರನ್ನು ಹತ್ತಿಕ್ಕುವ ಬದ್ದತೆಯೊಂದಿಗೆ ಪೊಲೀಸರ ಜತೆಗೂಡಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಸಿಂಗ್ ತಿಳಿಸಿದ್ದಾರೆ.
2014ರಲ್ಲಿ ಹೆಚ್ಚು ನಕ್ಸಲ್ ಚಟುವಟಿಕೆಯಿಂದ ಕೂಡಿದ ಜಿಲ್ಲೆಗಳ ಸಂಖ್ಯೆ 35 ಇತ್ತು. ಆದರೆ, 2025ರ ಹೊತ್ತಿಗೆ ಈ ಸಂಖ್ಯೆ ಆರಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 126ರಿಂದ 18ಕ್ಕೆ ಇಳಿದಿದೆ.
2014ರಲ್ಲಿ ವರದಿಯಾದ ಹಿಂಸಾತ್ಮಕ ಘಟನೆಗಳ ಸಂಖ್ಯೆ 1,080ದಷ್ಟಿತ್ತು. 2024ರ ಹೊತ್ತಿಗೆ 374 ಘಟನೆಗಳು ವರದಿಯಾಗಿದೆ. 2014ರಲ್ಲಿ ನಕ್ಸಲ್ ಹಿಂಸಾಚಾರದಲ್ಲಿ 287 ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದರೆ, 2024ರಲ್ಲಿ 19 ಮಂದಿ ಮೃತಪಟ್ಟಿದ್ದರು. ಇದೇ ಅವಧಿಯಲ್ಲಿ 2089 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
2024ರಲ್ಲಿ 928 ನಕ್ಸಲರು ಭದ್ರತಾ ಪಡೆಗಳ ಎದುರು ಶರಣಾಗಿದ್ದಾರೆ. ಆದರೆ ಈ ವರ್ಷ ಇಲ್ಲಿಯವರೆಗೆ 718 ನಕ್ಸಲರು ಶರಣಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
'ನಾವು ನಿರಂತರ ಮತ್ತು ನಿರ್ದಯವಾಗಿ ಕಾರ್ಯಾಚರಣೆಗಳ ಮೂಲಕ 2026ರ ಮಾರ್ಚ್ 31ರೊಳಗೆ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಬದ್ಧರಾಗಿದ್ದೇವೆ' ಎಂದು ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.