ADVERTISEMENT

ಆಧಾರ್‌ಗಾಗಿ ಒತ್ತಾಯಿಸಿದರೆ ₹1 ಕೋಟಿವರೆಗೆ ದಂಡ

ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ಅನುಮೋದನೆ

ಏಜೆನ್ಸೀಸ್
Published 19 ಡಿಸೆಂಬರ್ 2018, 10:03 IST
Last Updated 19 ಡಿಸೆಂಬರ್ 2018, 10:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಮೊಬೈಲ್ ಸಂಪರ್ಕ, ಬ್ಯಾಂಕ್‌ ಖಾತೆ ತೆರೆಯುವ ಸಂದರ್ಭ ಗುರುತಿನ ಅಥವಾ ವಿಳಾಸದ ದೃಢೀಕರಣಕ್ಕೆ ಆಧಾರ್ ಕಾರ್ಡ್‌ ಅನ್ನೇ ನೀಡಬೇಕು ಎಂದು ಒತ್ತಾಯಿಸುವ ದೂರಸಂಪರ್ಕ ಕಂಪನಿ, ಬ್ಯಾಂಕ್‌ಗಳಿಗೆ ಇನ್ನು ಮುಂದೆ ₹1 ಕೋಟಿವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಆಧಾರ್ ಮಾಹಿತಿ ಸೋರಿಕೆಗೆ ಯತ್ನಿಸಿದರೆ ತಪ್ಪಿತಸ್ಥರಿಗೆ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ.

ಆಧಾರ್‌ ದುರ್ಬಳಕೆಗೆ ದಂಡ ವಿಧಿಸುವುದಕ್ಕೆ ಸಂಬಂಧಿಸಿದ ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಇತ್ತಿಚೆಗೆ ಅನುಮೋದನೆ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆಧಾರ್ ಕುರಿತು ಈಚೆಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಟೆಲಿಗ್ರಾಫ್ ಕಾಯ್ದೆ ಮತ್ತು ಹಣಕಾಸು ಅಕ್ರಮ ತಡೆ ಕಾಯ್ದೆಗೆ (ಪಿಎಂಎಲ್‌ಎ) ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ, ಕೆವೈಸಿ ಮಾಹಿತಿ ನೀಡುವ ವೇಳೆ ಆಧಾರ್‌ ಅನ್ನು ಐಚ್ಛಿಕವಾಗಿರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆಧಾರ್ ಗೊಂದಲಗಳಿಗೆ ಸಂಬಂಧಿಸಿ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ‘ಬ್ಯಾಂಕ್ ಖಾತೆ, ಮೊಬೈಲ್‌ ನಂಬರ್‌, ಶಾಲಾ–ಕಾಲೇಜು ದಾಖಲಾತಿ, ಯುಜಿಸಿ, ನೀಟ್ ಮತ್ತು ಸಿಬಿಎಸ್‌ಸಿ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ’ ಎಂದು ಹೇಳಿತ್ತು.ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಪ್ಯಾನ್‌ ಕಾರ್ಡ್‌, ಆದಾಯ ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ ಎಂದೂ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.