ಲೋಕಮತ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಜಾಹೀರಾತು
ಮುಂಬೈ(ಮಹಾರಾಷ್ಟ್ರ): ಮುಂದಿನ ವಾರ ನಡೆಯಲಿರುವ ಸಂಪುಟ ಸಭೆಗೆ ಮಹಾಯುತಿ ಸರ್ಕಾರ ₹150 ಕೋಟಿ ವ್ಯಯಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ಆರೋಪವನ್ನು ಸರ್ಕಾರ ತಳ್ಳಿಹಾಕಿದೆ.
ಇದೇ 29ರಂದು ಅಹಲ್ಯನಗರ ಜಿಲ್ಲೆಯ ಚೋಂಡಿಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯ ಸಿದ್ದತೆಗೆ ಟೆಂಡರ್ ಆಹ್ವಾನಿಸಿದ್ದ ಸರ್ಕಾರ, ಇದಕ್ಕಾಗಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿತ್ತು.
ಜಾಹೀರಾತಿನಲ್ಲಿ ತಾತಾಲ್ಕಿಕ ವೇದಿಕೆ, ಹಸಿರು ಕೊಠಡಿಗಳು, ಶೌಚಾಲಯ, ಬ್ಯಾರಿಕೇಡ್, ಧ್ವನಿ ಮತ್ತು ಹವಾನಿಯಂತ್ರಣ ವ್ಯವಸ್ಥೆ, ವಿದ್ಯುತ್, ಅಗ್ನಿಶಾಮಕ ದಳ ಮತ್ತು ಸಿಸಿಟಿವಿ ಸೇರಿದಂತೆ ಎಲ್ಲ ರೀತಿಯ ಸಿದ್ದತೆಗೆ ಸುಮಾರು ₹150 ಕೋಟಿ ವ್ಯಯಿಸುವುದಾಗಿ ತಿಳಿಸಿತ್ತು.
ಈ ಜಾಹೀರಾತನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ‘ರಾಜ್ಯವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಹೇಳುವ ಸರ್ಕಾರ ಇದೀಗ ಸಚಿವ ಸಂಪುಟ ಸಭೆಗೆ ₹150 ಕೋಟಿ ವ್ಯರ್ಥ ಮಾಡಲು ಹೊರಟಿದೆ’ ಎಂದು ಕಿಡಿಕಾರಿದ್ದರು.
‘ಹಿರಿಯ ನಾಗರಿಕಗಾಗಿಯೇ ಇದ್ದ ತೀರ್ಥಯಾತ್ರೆ ಯೋಜನೆಯನ್ನು ಸ್ಥಗಿತಗೊಳಿಸಿದ್ದ ಈ ಸರ್ಕಾರ, ಚುನಾವಣೆಯಲ್ಲಿ ಭರವಸೆ ನೀಡಿದಂತೆ ‘ಲಡ್ಕಿ ಬೆಹೆನ್’ ಯೋಜನೆಯಡಿ ಭತ್ಯೆಯನ್ನು ಹೆಚ್ಚಿಸಿಲ್ಲ. ಕೃಷಿ ಸಾಲ ಮನ್ನಾ ಮಾಡಲೂ ನಿರಾಕರಿಸಿದೆ’ ಎಂದು ಹೇಳಿದ್ದಾರೆ.
‘ಸಚಿವರು, ಶಾಸಕರು, ಅಧಿಕಾರಿಗಳು ಉತ್ತಮ ಸೌಲಭ್ಯಗಳನ್ನು ಅನುಭವಿಸುತ್ತಿದ್ದರೆ, ಸಾಮಾನ್ಯ ಜನರು ಕಷ್ಟ ಪಡುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
₹150 ಕೋಟಿ ಅಲ್ಲ ₹1.5 ಕೋಟಿ: ಸರ್ಕಾರ ಸ್ಪಷ್ಟನೆ
ವಿವಾದದ ಬಗ್ಗೆ ಪ್ರತಿಕ್ರಿಯಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರ, ಪ್ರಸ್ತಾವಿತ ಸಚಿವ ಸಂಪುಟ ಸಭೆಗೆ ₹1.5 ಕೋಟಿಗೆ ಟೆಂಡರ್ ಆಹ್ವಾನಿಸಿ ಜಾಹೀರಾತು ನೀಡಲಾಗಿದ್ದು, ಪತ್ರಿಕೆಯಲ್ಲಿ ₹150 ಕೋಟಿ ಎಂದು ತಪ್ಪಾಗಿ ಮುದ್ರಿತವಾಗಿದೆ’ ಎಂದು ಹೇಳಿದೆ.
‘ಪುದಾರಿ ಮತ್ತು ಲೋಕಮತ ಎಂಬ ಎರಡು ಪತ್ರಿಕೆಗಳಲ್ಲಿ ಟೆಂಡರ್ ಕುರಿತ ಜಾಹೀರಾತು ಪ್ರಕಟವಾಗಿತ್ತು. ಪುದಾರಿಯಲ್ಲಿ ಸರಿಯಾದ ಮಾಹಿತಿ ಪ್ರಕಟವಾಗಿದ್ದು, ಲೋಕಮತ ಪತ್ರಿಕೆ ಮೊತ್ತವನ್ನು ತಪ್ಪಾಗಿ ಮುದ್ರಿಸಿದೆ’ ರಾಜ್ಯ ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.