ADVERTISEMENT

ನೀತಿ ಸಂಹಿತೆ ಉಲ್ಲಂಘನೆ 14 ಸಚಿವರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಪಿಟಿಐ
Published 13 ಅಕ್ಟೋಬರ್ 2020, 7:37 IST
Last Updated 13 ಅಕ್ಟೋಬರ್ 2020, 7:37 IST
ಕಾಂಗ್ರೆಸ್ ಚಿಹ್ನೆ
ಕಾಂಗ್ರೆಸ್ ಚಿಹ್ನೆ   

ಭೋಪಾಲ್: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಧಿಕಾರದ ದುರ್ಬಳಕೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ 14 ಸಚಿವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಆಗ್ರಹಪಡಿಸಿದೆ. ನ. 3ರಂದು ರಾಜ್ಯದಲ್ಲಿ ಉಪಚುನಾವಣೆ ನಡೆಯಲಿದೆ.

ಆದರೆ, ಆಡಳಿತರೂಡ ಬಿಜೆಪಿಯು ಆರೋಪವನ್ನು ತಳ್ಳಿಹಾಕಿದೆ. ತನ್ನ ಯಾವುದೇ ಅಭ್ಯರ್ಥಿಯು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಪ್ರತಿಪಾದಿಸಿದೆ.

ಶಾಸಕ ಸ್ಥಾನ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ 14 ಮಂದಿ ಈಗ ಸಚಿವರಾಗಿದ್ದಾರೆ. ಸದ್ಯ ನಡೆಯಲಿರುವ ಉಪಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದಾರೆ.

ADVERTISEMENT

ತನ್ನ ಆರೋಪ ಕುರಿತಂತೆ ಕಾಂಗ್ರೆಸ್‌ ಪಕ್ಷವು ಸೋಮವಾರ ರಾಜ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿತು. ಈ ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಮತದಾರರನ್ನು ಸೆಳೆಯಲು ಸುಳ್ಳು ಯೋಜನೆ ಘೋಷಿಸುತ್ತಿದ್ದು, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ನರೇಂದ್ರ ಸಿಂಗ್ ಸಲುಜಾ ಆರೋಪಿಸಿದರು.

ಆದರೆ, ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಅವರು, ಇದನ್ನು ತಳ್ಳಿಹಾಕಿದ್ದಾರೆ. ‘ಇದು, ಹತಾಶೆಯಿಂದ ಕೂಡಿದ ಆರೋಪ. ಈ ಸಚಿವರು ಈಗ ಜನತಾ ನ್ಯಾಯಾಲಯದ ಮುಂದೆ ಇದ್ದಾರೆ. ಅವರ ಹಣೆಬರಹ ಅಲ್ಲಿಯೇ ತೀರ್ಮಾನವಾಗಲಿ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.