ನವದೆಹಲಿ: ‘ದೇಶದ ಜನತೆ ಎಲ್ಐಸಿ-ಎಸ್ಬಿಐನಲ್ಲಿ ಹೂಡಿಕೆ ಮಾಡಿದ್ದ ಹಣ, ಅದಾನಿ ಸಮೂಹದ ವಂಚನೆಯಿಂದಾಗಿ ಮುಳುಗುತ್ತಿದೆ. ಸಾರ್ವಜನಿಕರ ಪರ ಧ್ವನಿ ಎತ್ತಲು ಮತ್ತು ಹೂಡಿಕೆದಾರರ ಆತಂಕದ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳು ಬಯಸುತ್ತಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸ್ನೇಹಿತನ ರಕ್ಷಣೆಗಾಗಿ ಚರ್ಚೆಗೆ ಬಾರದೇ ಪಲಾಯನ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಶುಕ್ರವಾರ ಆರೋಪಿಸಿವೆ.
ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಶುಕ್ರವಾರ ಆರ್ಜೆಡಿ, ಡಿಎಂಕೆ, ಎಎಪಿ, ಎಸ್ಪಿ, ಬಿಆರ್ಎಸ್, ಶಿವಸೇನಾ (ಠಾಕ್ರೆ), ಜೆಡಿಯು, ಎನ್ಸಿಪಿ ಸೇರಿದಂತೆ 16 ವಿಪಕ್ಷಗಳ ನಾಯಕರು ಸಭೆ ನಡೆಸಿ, ಸಾರ್ವಜನಿಕರ ಬಂಡವಾಳಕ್ಕೆ ಸಂಬಂಧಿಸಿದ ಅದಾನಿ ವಂಚನೆಯ ಹಗರಣದ ಸಮಗ್ರ ತನಿಖೆಗೆ ಆಗ್ರಹಿಸಿದರು.
‘ವಂಚನೆ ಹೊರಬರುತ್ತಿದ್ದಂತೆ ಡೌ ಜೋನ್ಸ್ ಅದಾನಿ ಸಮೂಹವನ್ನು ಸುಸ್ಥಿರತೆ ಸೂಚ್ಯಂಕಗಳಿಂದ ಕೈಬಿಟ್ಟಿತು. ಅದಾನಿ ವಿರುದ್ಧ ಪ್ರಪಂಚದಾದ್ಯಂತ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಪ್ರಧಾನಿ ಮೋದಿ ಮಾತ್ರ ಮೌನವಾಗಿದ್ದಾರೆ. ಸೆಬಿ, ಇ.ಡಿ, ಆರ್ಒಸಿ ಮತ್ತು ಎಸ್ಎಫ್ಐಒ ಈಗ ಎಲ್ಲಿವೆ? ಕೇಂದ್ರ ಸರ್ಕಾರ ಯಾವಾಗ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಪ್ರಶ್ನಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.