ADVERTISEMENT

ಬಿಜೆಪಿಯ ನಾಲ್ವರು ಮುಖಂಡರ ಟ್ವಿಟರ್ ಖಾತೆ ಅಮಾನತು:ಕಾಂಗ್ರೆಸ್‌ನಿಂದ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮೇ 2021, 16:23 IST
Last Updated 20 ಮೇ 2021, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖಂಡರಾದ ಬಿ.ಎಲ್‌.ಸಂತೋಷ್, ಸ್ಮೃತಿ ಇರಾನಿ ಮತ್ತು ವಕ್ತಾರ ಸಂಬೀತ್‌ ಪಾತ್ರಾ ಅವರ ಟ್ವಿಟರ್‌ ಖಾತೆಗಳನ್ನು ಶಾಶ್ವತವಾಗಿ ಅಮಾನತುಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಪಡಿಸಿದೆ. ಈ ಬಗ್ಗೆ ಟ್ವಿಟರ್‌ ಆಡಳಿತಕ್ಕೆ ಪತ್ರ ಬರೆದಿದೆ.

ಆಡಳಿತದಲ್ಲಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಟೂಲ್‌ಕಿಟ್‌ ಸಂಬಂಧಿಸಿ ತಪ್ಪು ಮಾಹಿತಿಗಳನ್ನು ಇವರು ಹಂಚಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ರಾಜೀವ್ ಗೌಡ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷ ರೋಹನ್‌ ಗುಪ್ತಾ ಅವರು ಪತ್ರದಲ್ಲಿ, ಬಿಜೆಪಿಯ ಈ ನಾಲ್ವರು ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರದ ವೈಫಲ್ಯ ಮರೆಮಾಚಲು ಟ್ವಿಟರ್ ವೇದಿಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ADVERTISEMENT

ಬಿಜೆಪಿ ನಾಯಕರು ಲೆಟರ್‌ಹೆಡ್‌ ಅನ್ನು ತಿರುಚಿದ್ದು ದುರುದ್ದೇಶದ, ತಪ್ಪಾದ, ತಿರುಚಲಾದ ಮಾಹಿತಿಯನ್ನು ಮುದ್ರಣ ಮಾಡಿ ಹಂಚಿಕೆ ಮಾಡಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ರೂಪಾಂತರ ಸೋಂಕು ಕುರಿತಂತೆ ಕಾಂಗ್ರೆಸ್‌ ಪ್ರಧಾನಿ ಮೋದಿ ಅವರ ವರ್ಚಸ್ಸಿಗೆ ಕುಂದು ತರುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಪೂರಕವಾಗಿ ಟೂಲ್‌ಕಿಟ್ ಉಲ್ಲೇಖಿಸಿತ್ತು. ಇದು, ಉಭಯ ಪಕ್ಷಗಳ ಮುಖಂಡರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.