ಕಾಂಗ್ರೆಸ್
ಮುಂಬೈ: ಚುನಾವಣೆಯ ನಂತರ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಹಿನ್ನೆಲೆ ಮಹಾರಾಷ್ಟ್ರ ಅಂಬರನಾಥ್ ಪುರಸಭೆಗೆ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ 12 ಕೌನ್ಸಿಲರ್ಗಳನ್ನು ವಜಾ ಮಾಡಲಾಗಿದೆ.
ಠಾಣೆಯ ಅಂಬರನಾಥ್ ಪುರಸಭೆಯಲ್ಲಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ 27 ಸ್ಥಾನಗಳೊಂದಿಗೆ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ ಬೇಕಾದ 31 ಸ್ಥಾನಗಳಿಗಾಗಿ ಕಾಂಗ್ರೆಸ್ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತು.
ಅಂಬರನಾಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಅವರನ್ನು ಸಹ ವಜಾ ಮಾಡಲಾಗಿದೆ. ಅಂಬರನಾಥ್ ಬ್ಲಾಕ್ ಅನ್ನೂ ವಿಸರ್ಜಿಸಿರುವುದಾಗಿ ಮಹಾರಾಷ್ಟ್ರದ ಕಾಂಗ್ರೆಸ್ ಘಟಕ ಪತ್ರದಲ್ಲಿ ತಿಳಿಸಿದೆ.
ಬಿಜೆಪಿ ಜೊತೆ ಹೊಂದಾಣಿಕೆ ಕುರಿತಂತೆ ನಮಗೆ ಮಾಹಿತಿ ನೀಡಿರಲಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪಕ್ಷೇತರ ಕೌನ್ಸಿಲರ್ಗಳು ಸೇರಿದಂತೆ ಹಲವು ಕೌನ್ಸಿಲರ್ಗಳು ಸೇರಿ ಅಂಬರನಾಥ್ ವಿಕಾಸ್ ಅಘಾಡಿ ರಚಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವುದೇ ಅಧಿಕೃತ ಮೈತ್ರಿ ಇಲ್ಲ. ಆದಾಗ್ಯೂ, ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಹಾಗಾಗಿ, ಶೋಕಾಸ್ ನೋಟಿಸ್ ನೀಡಲಾಗಿತ್ತು ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.
ಡಿಸೆಂಬರ್ 31ರಂದು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ ಅನ್ವಯ ಕಾಂಗ್ರೆಸ್ನ 12 ಸದಸ್ಯರು, ಬಿಜೆಪಿಯ 14 ಸದಸ್ಯರು, ಎನ್ಸಿಪಿಯ 4 ಮತ್ತು ಪಕ್ಷೇತರ ಒಬ್ಬ ಸದಸ್ಯ ಸೇರಿ ಪುರಸಭೆಯಲ್ಲಿ ಹೊಂದಾಣಿಕೆ ಮೂಲಕ ಅಧಿಕಾರಕ್ಕೇರಲು ಮುಂದಾಗಿದ್ದರು.
60 ಸದಸ್ಯ ಬಲದ ಅಂಬರನಾಥ್ ಪುರಸಭೆಗೆ ಡಿಸೆಂಬರ್ 20ರಂದು ನಡೆದ ಚುನಾವಣೆಯಲ್ಲಿ ಶಿವಸೇನಾ 27 ಸ್ಥಾನ ಗೆದ್ದಿತ್ತು. ಅಧಿಕಾರಕ್ಕೇರಲು 4 ಸ್ಥಾನಗಳ ಕೊರತೆ ಇತ್ತು. ಬಿಜೆಪಿ 14, ಕಾಂಗ್ರೆಸ್ 12, ಎನ್ಸಿಪಿ 4 ಮತ್ತು ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಆಯ್ಕೆಯಾಗಿದ್ದರು.
ಎಐಎಂಐಎಂ ಜೊತೆ ಬಿಜೆಪಿ ನಂಟು:
ಅಕೋಲ ಜಿಲ್ಲೆಯ ಅಕೋಟ್ ನಗರ ಪರಿಷತ್ನಲ್ಲಿ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.