ನವದೆದಲಿ: ‘ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷವನ್ನು ನಾನು ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದೆ’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ.
ಈ ವಿಚಾರವಾಗಿ ಪ್ರಧಾನಿ ಮೌನ ವಹಿಸಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಮೋದಿಜಿ ಐದು ಯುದ್ಧವಿಮಾನಗಳ ಕುರಿತಾದ ಸತ್ಯಾಂಶವೇನು’ ಎಂದು ಪ್ರಶ್ನಿಸಿದ್ದಾರೆ.
ಟ್ರಂಪ್ ಅವರು ಈ ರೀತಿ ಹೇಳುತ್ತಿರುವುದು 24ನೇ ಬಾರಿ. ಹಾಗಾಗಿ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂಸತ್ನಲ್ಲಿ ಸ್ಪಷ್ಟ ಹೇಳಿಕೆ ನೀಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ. ‘ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷವನ್ನು ತಾವೇ ನಿಲ್ಲಿಸಿದ್ದಾಗಿ ಟ್ರಂಪ್ ಅವರು ಕಳೆದ 70 ದಿನಗಳಿಂದಲೂ ಹೇಳುತ್ತಲೇ ಇದ್ದಾರೆ. ಈಗ ಸಂಸತ್ನ ಮುಂಗಾರು ಅಧಿವೇಶನ ಆರಂಭಕ್ಕೆ ಎರಡು ದಿನ ಬಾಕಿ ಇವೆ. ಉಭಯ ದೇಶಗಳ ನಡುವಣ ಸಂಘರ್ಷಕ್ಕೆ ಸಂಬಂಧಿಸಿದ ‘ಟ್ರಂಪ್ ಕ್ಷಿಪಣಿ’ಯು ಈಗ 24ನೇ ಬಾರಿ ದಾಳಿ ಮಾಡಿದೆ’ ಎಂದಿದ್ದಾರೆ.
ನ್ಯೂಯಾರ್ಕ್/ವಾಷಿಂಗ್ಟನ್/ನವದೆಹಲಿ (ಪಿಟಿಐ): ‘ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ ಐದು ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿತ್ತು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಲ್ಲದೇ, ‘ಉಭಯ ದೇಶಗಳ ನಡುವಿನ ಸಂಘರ್ಷವನ್ನು ನಾನು ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದೆ’ ಎಂಬ ತಮ್ಮ ಹೇಳಿಕೆಯನ್ನು ಸಹ ಅವರು ಪುನರುಚ್ಚರಿಸಿದ್ದಾರೆ.
ಎರಡೂ ದೇಶಗಳು ಸೇರಿ ಒಟ್ಟು ಐದು ಯುದ್ಧವಿಮಾನಗಳು ನಾಶವಾಗಿವೆಯೇ? ಅಥವಾ ಯಾವ ದೇಶವು ಮತ್ತೊಂದು ದೇಶದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬುದನ್ನು ಟ್ರಂಪ್ ಅವರು ನಿರ್ದಿಷ್ಟವಾಗಿ ಹೇಳಿಲ್ಲ.
ಟ್ರಂಪ್ ಅವರ ಈ ಹೇಳಿಕೆ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ವಾಗ್ದಾಳಿ ನಡೆಸಿದ್ದು, ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದೆ.
ರಿಪಬ್ಲಿಕನ್ ಪಕ್ಷದ ಸೆನೆಟರ್ಗಳಿಗಾಗಿ ಶ್ವೇತಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭೋಜನಕೂಟದಲ್ಲಿ ಟ್ರಂಪ್ ಈ ಕುರಿತು ಮಾತನಾಡಿದ್ದಾರೆ. ‘ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ನಡೆದಿದ್ದ ವೇಳೆ, ನಾಲ್ಕು ಅಥವಾ ಐದು ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ. ವಾಸ್ತವದಲ್ಲಿ ಐದು ಯುದ್ಧವಿಮಾನಗಳನ್ನು ಹೊಡೆದುರುಳಿಸಿರಬಹುದು’ ಎಂದು ಹೇಳಿದ್ದಾರೆ.
‘ಅಣ್ವಸ್ತ್ರ ಹೊಂದಿರುವ ಎರಡು ದೇಶಗಳು ಪರಸ್ಪರರ ಮೇಲೆ ದಾಳಿ ನಡೆಸುತ್ತಿದ್ದವು. ಆ ರಾಷ್ಟ್ರಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ವ್ಯಾಪಾರ ಸಂಬಂಧದ ಮೂಲಕ ಆ ಸಂಘರ್ಷವನ್ನು ನಾವು ಬಗೆಹರಿಸಿದೆವು’ ಎಂದು ಟ್ರಂಪ್ ಹೇಳಿದ್ದಾರೆ.
‘ನೀವು ಪರಸ್ಪರರ ಮೇಲೆ ಕ್ಷಿಪಣಿ, ಅಣ್ವಸ್ತ್ರಗಳಿಂದ ದಾಳಿ ಮಾಡುತ್ತಾ ಇದ್ದಲ್ಲಿ, ನಾವು ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಹೇಳಿದ್ದೆ’ ಎಂದಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ಭಾರತ ಮೇ 7ರಂದು ‘ಆಪರೇಷನ್ ಸಿಂಧೂರ’ ಆರಂಭಿಸಿತು. ಮೇ 10ರಂದು ಉಭಯ ದೇಶಗಳು ಸಂಘರ್ಷ ನಿಲ್ಲಿಸಲು ಒಪ್ಪಿಕೊಂಡವು.
ಆದರೆ, ತಾನು ಮಧ್ಯಸ್ಥಿಕೆ ವಹಿಸಿಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಿದೆ ಎಂದು ಟ್ರಂಪ್ ಮೇ 10ರಂದು ಘೋಷಿಸಿದ್ದರು. ಆಗಿನಿಂದಲೂ ಅವರು ಈ ಹೇಳಿಕೆಯನ್ನು ಪುನರುಚ್ಚರಿಸುತ್ತಲೇ ಇದ್ದಾರೆ.
ಹಲವು ರಾಷ್ಟ್ರಗಳ ನಡುವಿನ ಭೀಕರ ಯುದ್ಧಗಳು ಸೇರಿ ಹಲವಾರು ಸಂಘರ್ಷಗಳನ್ನು ನಾನು ನಿಲ್ಲಿಸಿದ್ದೇನೆ. ಈ ಬಗ್ಗೆ ನನಗೆ ಹೆಮ್ಮೆ ಇದೆಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
ದೇಶವು ಸತ್ಯ ತಿಳಿದುಕೊಳ್ಳುವ ಹಕ್ಕು ಹೊಂದಿದೆ. ಟ್ರಂಪ್ ಹೇಳಿಕೆ ಕುರಿತು ಪ್ರಧಾನಿ ಮೋದಿ ಅವರು ಸಂಸತ್ನಲ್ಲಿ ಸ್ಪಷ್ಟ ಹಾಗೂ ನಿಸ್ಸಂದಿಗ್ಧ ಹೇಳಿಕೆ ನೀಡಬೇಕುರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.