ADVERTISEMENT

ರಾಷ್ಟ್ರಪತ್ನಿ ವಿವಾದ: ರಾಷ್ಟ್ರಪತಿ ಮುರ್ಮುಗೆ ಪತ್ರ ಬರೆದು ಕ್ಷಮೆ ಕೋರಿದ ಅಧೀರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2022, 13:48 IST
Last Updated 29 ಜುಲೈ 2022, 13:48 IST
ಅಧೀರ್‌ ರಂಜನ್‌ ಚೌಧರಿ
ಅಧೀರ್‌ ರಂಜನ್‌ ಚೌಧರಿ    

ನವದೆಹಲಿ: ರಾಷ್ಟ್ರಪತಿಯವರನ್ನು ‘ರಾಷ್ಟ್ರಪತ್ನಿ’ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಶುಕ್ರವಾರ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ.

‘ನೀವು ಹೊಂದಿರುವ ಸ್ಥಾನವನ್ನು ವಿವರಿಸುವಾಗ ತಪ್ಪು ಪದವನ್ನು ಬಳಸಿದ್ದಕ್ಕಾಗಿ ವಿಷಾದವನ್ನು ವ್ಯಕ್ತಪಡಿಸಲು ನಾನು ಈ ಪತ್ರ ಬರೆಯುತ್ತಿದ್ದೇನೆ. ನಾಲಿಗೆ ತಪ್ಪಾಗಿ ಹೊರಳಿ ಈ ಪ್ರಮಾದವಾಗಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಮತ್ತು ಇದನ್ನು ಸ್ವೀಕರಿಸಬೇಕೆಂದು ವಿನಂತಿಸುತ್ತೇನೆ’ ಎಂದು ಚೌಧರಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಧೀರ್‌ ರಂಜನ್‌ ಚೌಧರಿ ಅವರು ಲೋಕಸಭೆ ಕಲಾಪದ ವೇಳೆ 'ರಾಷ್ಟ್ರಪತ್ನಿ' ಎಂದು ಉಲ್ಲೇಖಿಸಿದ್ದರು. ಅವರ ಈ ಮಾತು ಭಾರಿ ವಿವಾದ ಸೃಷ್ಟಿ ಮಾಡಿತ್ತು.

ADVERTISEMENT

ಈ ವಿಚಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಅಧೀರ್‌ ರಂಜನ್‌ ಚೌಧರಿ ಅವರಿಗೆ ನೋಟಿಸ್‌ ನೀಡಿ ವಿವರಣೆ ಕೇಳಿತ್ತು. ಅಲ್ಲದೆ, ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಅವಹೇಳನಕಾರಿ ಹೇಳಿಕೆಗಾಗಿ ಅಧೀರ್ ರಂಜನ್ ಚೌಧರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಎನ್‌ಸಿಡಬ್ಲ್ಯು ಪತ್ರ ಬರೆದಿತ್ತು.

ಈ ವಿವಾದವು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಚಿವೆ ಸ್ಮೃತಿ ಇರಾನಿ ಅವರ ಮುಖಾಮುಖಿಗೂ ಕಾರಣವಾಗಿತ್ತು.

ವಿವಾದದ ಹಿನ್ನೆಲೆಯಲ್ಲಿ ಸಂಸತ್‌ ಕಲಾಪವನ್ನು ಗುರುವಾರ ಮುಂದೂಡಲಾಯಿತು. ಸದನದಿಂದ ಹೊರ ನಡೆಯುತ್ತಿದ್ದ ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿಯ ಕೆಲ ಮಹಿಳಾ ಸಂಸದರು ಘೋಷಣೆ ಕೂಗಿದರು. ಆಗ ಸೋನಿಯಾ ಗಾಂಧಿ ಅವರು ಹಿರಿಯ ಬಿಜೆಪಿ ಸಂಸದೆ ರಮಾದೇವಿ ಅವರ ಬಳಿಗೆ ತೆರಳಿ, ನನ್ನನ್ನು ಏಕೆ ಎಳೆದುತರಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದರು. ಅಲ್ಲಿಯೇ ಇದ್ದ ಸಚಿವೆ ಸ್ಮೃತಿ ಇರಾನಿ ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಸೋನಿಯಾ ಅವರು ತಮ್ಮೊಂದಿಗೆ ಮಾತನಾಡದಂತೆ ಅವರಿಗೆ ತಾಕೀತು ಮಾಡಿದರೆನ್ನಲಾಗಿದೆ. ನಂತರ, ಎನ್‌ಸಿಪಿಯ ಸುಪ್ರಿಯಾ ಸುಳೆ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸದಸ್ಯರನ್ನು ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.

ಘಟನೆಯ ಬಗ್ಗೆ ಟ್ವೀಟ್‌ ಮಾಡಿದ್ದ ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜೈರಾಮ್ ರಮೇಶ್, ’ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಇಂದು ಲೋಕಸಭೆಯಲ್ಲಿ ದೌರ್ಜನ್ಯ ನಡೆಸಿದ್ದಾರೆ. ಅತಿರೇಕವಾಗಿ ವರ್ತಿಸಿದ್ದಾರೆ. ಆದರೆ ಅವರನ್ನು ಸ್ಪೀಕರ್ ಪ್ರಶ್ನಿಸುತ್ತಾರೆಯೇ? ನಿಯಮಗಳು ವಿರೋಧ ಪಕ್ಷಗಳಿಗೆ ಮಾತ್ರವೇ?’ ಎಂದು ಪ್ರಶ್ನೆ ಮಾಡಿದ್ದರು.

ಇವುಗಳನ್ನೂಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.