ವಿಜಯ್ ಶಾ ವಿರುದ್ಧ ಪೋಸ್ಟರ್ ಹಂಚಿಕದ ಕಾಂಗ್ರೆಸ್
ಚಿತ್ರಕೃಪೆ: ಎಕ್ಸ್
ಇಂದೋರ್(ಮಧ್ಯಪ್ರದೇಶ):ಸಚಿವ ವಿಜಯ್ ಶಾ ಅವರು ನಾಪತ್ತೆಯಾಗಿದ್ದಾರೆ ಎಂದು ಹೇಳುವ ಭಿತ್ತಿಪತ್ರಗಳನ್ನು ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಕಾಂಗ್ರೆಸ್ ಮುಖಂಡ ವಿವೇಕ್ ಖಂಡೇಲ್ವಾಲ್ ವಿವಿಧೆಡೆ ಅಂಟಿಸಿದ್ದಾರೆ.
‘ನಾಪತ್ತೆಯಾದ ವ್ಯಕ್ತಿಯ ಶೋಧ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಭಿತ್ತಿಪತ್ರ ಅಂಟಿಸಲಾಗಿದೆ. ಸಚಿವರ ಬಗ್ಗೆ ಮಾಹಿತಿ ಕೊಟ್ಟವರಿಗೆ ₹11 ಸಾವಿರ ನೀಡಲಾಗುತ್ತದೆ ಎಂದು ಖಂಡೇಲ್ವಾಲ್ ಹೇಳಿದ್ದಾರೆ.
‘ಶಾ ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಂಪುಟ ಸಭೆಗಳಿಗೂ ಅವರು ಬರುತ್ತಿಲ್ಲ. ಹೀಗಾಗಿ ಭಿತ್ತಿಪತ್ರ ಅಂಟಿಸಿದ್ದೇವೆ’ ಎಂದು ಖಂಡೇಲ್ವಾಲ್ ಹೇಳಿದ್ದಾರೆ. ವಿಜಯ್ ಶಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವವರೆಗೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಮೇ 12ರಂದು ಇಂದೋರ್ನ ಮೌವ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಮಾತನಾಡಿದ್ದ ವಿಜಯ್ ಶಾ, ಕರ್ನಲ್ ಸೋಫಿಯಾ ಅವರನ್ನು ‘ಭಯೋತ್ಪಾದಕರ ಸಹೋದರಿ’ ಎಂದು ಕರೆದು ವಿವಾದ ಸೃಷ್ಟಿಸಿದ್ದರು.
ಶಾ ಹೇಳಿಕೆ ಸಂಬಂಧಪಟ್ಟಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಮಧ್ಯಪ್ರದೇಶ ಹೈಕೋರ್ಟ್, ಎಫ್ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಕೂಡ ಶಾ ಅವರಿಗೆ ಛೀಮಾರಿ ಹಾಕಿದ್ದು, ಎಸ್ಐಟಿ ತನಿಖೆಗೆ ಆದೇಶಿಸಿತ್ತು.
ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಮಧ್ಯಪ್ರದೇಶದ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಐಜಿಪಿ ಪ್ರಮೋದ್ ವರ್ಮಾ, ಡಿಐಜಿ ಕಲ್ಯಾಣ್ ಚಕ್ರವರ್ತಿ ಮತ್ತು ಎಸ್ಪಿ ವಾಹಿನಿ ಸಿಂಗ್ ಅವರು ಈ ತಂಡದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.