ನವದೆಹಲಿ:ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಲುವಾಗಿ ಎಲ್ಲರೂ ಒಂದಾಗಿದನಿ ಎತ್ತಬೇಕು ಎಂದು ದೇಶದ ಜನರಿಗೆ ಕರೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು #SpeakUpForDemocracy ಅಭಿಯಾನ ಆರಂಭಿಸಿದ್ದಾರೆ.
ಈ ಸಂಬಂಧ ಟ್ವಿಟರ್ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ರಾಹುಲ್, ‘#SpeakUpForDemocracy ಅಭಿಯಾನದಲ್ಲಿ ಒಂದಾಗಿ ಪಾಲ್ಗೊಳ್ಳಿ. ಪ್ರಜಾಪ್ರಭುತ್ವವನ್ನು ಉಳಿಸಲು ದನಿ ಎತ್ತೋಣ’ ಎಂದು ಬರೆದುಕೊಂಡಿದ್ದಾರೆ. ವಿಡಿಯೊ ಹಿನ್ನಲೆ ಧ್ವನಿಯಲ್ಲಿ, ಬಿಜೆಪಿಯು ಪ್ರಜಾಪ್ರಭುತ್ವವನ್ನು ಕೆಡವಿದೆ ಮತ್ತು ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವನ್ನು ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ.
‘ಇಂದು ಇಡೀ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಬಿಜೆಪಿಯು ಸಂವಿಧಾನವನ್ನು ಕೆಡವುತ್ತಿದೆ ಮತ್ತು ಪ್ರಜಾಪ್ರಭುತ್ವನ್ನು ನಾಶಮಾಡುತ್ತಿದೆ. ‘2018ರಲ್ಲಿ ರಾಜಸ್ಥಾನದ ಜನರು ಕಾಂಗ್ರೆಸ್ ಸರ್ಕಾರವನ್ನು ಚುನಾಯಿಸಿದ್ದರು. ಬಿಜೆಪಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದ ನಂತರ ಇದೀಗ ರಾಜಸ್ಥಾನದಲ್ಲಿ ‘ಪ್ರಜಾಪ್ರಭುತ್ವವನ್ನು ಕೊಲ್ಲಲು’ ಸಂಚು ರೂಪಿಸುತ್ತಿದೆ’ ಎಂದು ಕಿಡಿಕಾರಲಾಗಿದೆ.
‘ಚುನಾಯಿತ ಸರ್ಕಾರಗಳನ್ನು ಬೀಳಿಸುವುದನ್ನು ನಿಲ್ಲಿಸುವಂತೆ ನಾವು ಬಿಜೆಪಿಯನ್ನು ಒತ್ತಾಯಿಸುತ್ತೇವೆ. ನಮ್ಮಸಾಂವಿಧಾನಿಕ ಹಕ್ಕುಗಳೊಳಗೆ ತಕ್ಷಣವೇ ಅಧಿವೇಶನವನ್ನು ಕರೆಯಬೇಕು ಎಂದು ನಾವು ಆಗ್ರಹಿಸುತ್ತೇವೆ. ನಿಮ್ಮ ದನಿ ಏರಿಸಲು, ಪ್ರಜಾಪ್ರಭುತ್ವವನ್ನು ರಕ್ಷಿಸಲು #SpeakUpForDemocracy ಅಭಿಯಾನ ಸೇರಿಕೊಳ್ಳಿ’ ಎಂದು ಮನವಿ ಮಾಡಲಾಗಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದರು.
ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವಣ ಭಿನ್ನಾಭಿಪ್ರಾಯದ ಬಳಿಕ ರಾಜಸ್ಥಾನ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.