ಮನಮೋಹನ ಸಿಂಗ್ಗೆ ಪತ್ನಿಕೌರ್ ಅಂತಿಮ ನಮನ
– ಪಿಟಿಐ ಚಿತ್ರ
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಪಾರ್ಥೀವ ಶರೀರವನ್ನು ಶನಿವಾರ ಬೆಳಿಗ್ಗೆ ಎಐಸಿಸಿ ಮುಖ್ಯ ಕಚೇರಿಗೆ ತರಲಾಯಿತು. ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿ ಪಕ್ಷದ ಪ್ರಮುಖರು ಅಗಲಿದ ಮೇಧಾವಿಗೆ ಅಂತಿನ ನಮನ ಸಲ್ಲಿಸಿದರು.
ಮೂರನೇ ಮೋತಿಲಾಲ್ ಮಾರ್ಗದಲ್ಲಿರುವ ಸಿಂಗ್ ನಿವಾಸದಿಂದ ಅವರ ಪಾರ್ಥೀವ ಶರೀರವನ್ನು ಬಿಗಿ ಭದ್ರತೆಯೊಂದಿಗೆ ಎಐಸಿಸಿ ಕಚೇರಿಗೆ ತರಲಾಯಿತು. ಮೃತದೇಹದ ಮೇಲೆ ತ್ರಿವರ್ಣ ಧ್ವಜವನ್ನು ಹೊದಿಸಲಾಗಿತ್ತು. ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ ಎಐಸಿಸಿ ಕಚೇರಿ ತಲುಪಿತು.
ಸಿಂಗ್ ಪತ್ನಿ ಗುರುಶರಣ್ ಕೌರ್, ಮಕ್ಕಳು ಹಾಗೂ ಕುಟುಂಬಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಎಐಸಿಸಿ ಕಚೇರಿಯಲ್ಲಿ ಖರ್ಗೆ ಹಾಗೂ ಸೋನಿಯಾ ಅವರನ್ನು ಬರಮಾಡಿಕೊಂಡರು.
ಹೂಮಾಲೆ ಇರಿಸಿ ಪತ್ನಿ ಕೌರ್ ಅಂತಿಮ ನಮನ ಸಲ್ಲಿಸಿದರು. ಮಧ್ಯದಲ್ಲಿ ಚರಕ ಇರುವ ಕಾಂಗ್ರೆಸ್ನ ‘ಐತಿಹಾಸಿಕ’ ಧ್ವಜವನ್ನು ಇರಿಸಿ ಖರ್ಗೆ ಹಾಗೂ ಸೋನಿಯಾ ಗೌರವ ಅರ್ಪಿಸಿದರು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹಲೋತ್, ಕಾಂಗ್ರೆಸ್ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸಹಿತ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ನಾಯಕರು ಸಿಂಗ್ಗೆ ಗೌರವ ಅರ್ಪಿಸಿದರು.
ಒಂದು ಗಂಟೆ ಅವರ ಪಾರ್ಥೀವ ಶರೀರವನ್ನು ಎಐಸಿಸಿ ಕಚೇರಿಯಲ್ಲಿ ಇರಿಸಿ, ಬಳಿಕ ಅಂತ್ಯ ಸಂಸ್ಕಾರ ನಡೆಯುವ ನಿಗಮ್ಬೋಧ್ ಘಾಟ್ಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಸರ್ವ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.