ADVERTISEMENT

'ಮಹಾ ಕಗ್ಗಂಟು' ಬಿಡಿಸಲು ಸೋನಿಯಾ ಭೇಟಿಗೆ ಸಿದ್ಧರಾದ ಕಾಂಗ್ರೆಸ್ ಶಾಸಕರು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 12:25 IST
Last Updated 8 ನವೆಂಬರ್ 2019, 12:25 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಸರ್ಕಾರ ರಚನೆ ವಿಚಾರದಲ್ಲಿ ಬಿಜೆಪಿ ಮತ್ತು ಶಿವಸೇನಾ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ತಂಡವೊಂದು ಶಿವಸೇನಾ ನೇತೃತ್ವದಲ್ಲಿ ಸರ್ಕಾರ ರಚನೆಯಪರ್ಯಾಯ ವ್ಯವಸ್ಥೆಗಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದೆ.

ರಾಜ್ಯದಲ್ಲಿ ಸರ್ಕಾರ ರಚನೆಗೆ ಇರುವ ಅಡಚಣೆಯಿಂದ ಹೊರಬಂದು ಹೊಸ ದಾರಿಯನ್ನು ಕಂಡುಕೊಳ್ಳುವಂತೆ ಪಕ್ಷದ ನಾಯಕರು ಕರೆ ನೀಡಿದ್ದರೂ ಕೂಡ ಸೋನಿಯಾ ಗಾಂಧಿಯವರು ಶಿವಸೇನಾದೊಂದಿಗೆ ಯಾವುದೇ ಸಂಬಂಧವನ್ನು ಹೊಂದದೆಯೇ ಅಚಲವಾಗಿ ಉಳಿದಿದ್ದಾರೆ.

ಪಕ್ಷದಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕರ ಒಂದು ಗುಂಪು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗಿರುವ ಎಲ್ಲ ಅವಕಾಶಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದೆಮತ್ತು ಯಾವುದೇ ಆರೋಪ ತನ್ನ ಮೇಲೆ ಬರದಂತೆ ನೋಡಿಕೊಳ್ಳುತ್ತಿದೆ.

ADVERTISEMENT

ಕಾಂಗ್ರೆಸ್‌ನ ವಿಜಯ್ ವಾಡೇಟಿವಾರ್ ಹೇಳುವಂತೆ ಕಾಂಗ್ರೆಸ್‌ನ 44 ಶಾಸಕರ ಪೈಕಿ ಶೇ. 90ರಷ್ಟು ಮಂದಿ ಮಹಾರಾಷ್ಟ್ರದಲ್ಲಿ ಮುಂದಿನ ಅವಧಿಗೆ ಬಿಜೆಪಿಯು ಸರ್ಕಾರ ರಚಿಸುವುದು ಬೇಡ ಎನ್ನುವ ಅಭಿಪ್ರಾಯವನ್ನೇ ಹೊಂದಿದ್ದಾರೆ ಎಂದ ತಿಳಿಸಿದ್ದಾರೆ.

ಇದುವರೆಗೂ ಮುಂಬೈನಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದ ಕಾಂಗ್ರೆಸ್ ಶಾಸಕರು ಇದೀಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಕೇಂದ್ರದ ಕಾಂಗ್ರೆಸ್ ಹಿರಿಯ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಶಿವಸೇನಾಗೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡುವುದರೊಂದಿಗೆ ಸರ್ಕಾರ ರಚನೆಯಿಂದ ಬಿಜೆಪಿಯನ್ನು ಹೊರಗಿಡಲು ಯೋಜನೆ ರೂಪಿಸಿದ್ದಾರೆ.

ಇಷ್ಟೆಲ್ಲ ನಡೆಯುತ್ತಿದ್ದರೂ ಗುರುವಾರ ರಾತ್ರಿವರೆಗೂ ಸೋನಿಯಾ ಗಾಂಧಿ ತಮ್ಮ ಭೇಟಿಗೆ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಿಗೆ ಯಾವುದೇ ಅನುಮತಿ ನೀಡಿಲ್ಲ. ಆದರೆ ಈಗಾಗಲೇ ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.