ADVERTISEMENT

ಗಾಂಧಿ ಕುಟುಂಬದ ನೆರಳಿನಿಂದ ಕಾಂಗ್ರೆಸ್ ಹೊರಬರಬೇಕು: ಹಿಮಾಚಲ ಪ್ರದೇಶದ ಮಾಜಿ ಸಿಎಂ

ಪಿಟಿಐ
Published 1 ಅಕ್ಟೋಬರ್ 2021, 12:16 IST
Last Updated 1 ಅಕ್ಟೋಬರ್ 2021, 12:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಧರ್ಮಶಾಲಾ: ರಾಷ್ಟ್ರ ರಾಜಕೀಯದಲ್ಲಿ ಮತ್ತೆ ಪ್ರಸ್ತುತವಾಗಲು ಗಾಂಧಿ ಕುಟುಂಬದ ನೆರಳಿನಿಂದ ಕಾಂಗ್ರೆಸ್ ಹೊರಬರಬೇಕು ಎಂದು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಶಾಂತ ಕುಮಾರ್ ಶುಕ್ರವಾರ ಹೇಳಿದ್ದಾರೆ.

ಒಂದು ವೇಳೆ ಕಾಂಗ್ರೆಸ್ ರಾಜಕೀಯವನ್ನು ತೊರೆದರೆ, ಭಾರತದ ಪ್ರಜಾಪ್ರಭುತ್ವವು ರಾಷ್ಟ್ರೀಯ ವಿರೋಧ ಪಕ್ಷವಿಲ್ಲದೆ ಇರುತ್ತದೆ. ಬಿಜೆಪಿ ನಂತರ ಇರುವ ಏಕೈಕ ರಾಷ್ಟ್ರೀಯ ಪಕ್ಷ ಎಂದರೆ ಅದು ಕಾಂಗ್ರೆಸ್ ಎಂಬುದನ್ನು ಅವರು ಒತ್ತಿ ಹೇಳಿದರು.

'ಪ್ರಜಾಪ್ರಭುತ್ವದ ರಥವು ಎರಡು ಚಕ್ರಗಳ ಮೇಲೆ ಚಲಿಸುತ್ತದೆ. ಒಂದು ಆಡಳಿತ ಪಕ್ಷ ಮತ್ತು ಇನ್ನೊಂದು ವಿರೋಧ ಪಕ್ಷ'. ಒಂದು ಕಾಲದಲ್ಲಿ ನೆಹರೂ, ಗಾಂಧಿ ಮತ್ತು ಪಟೇಲ್ ಅವರ ನೇತೃತ್ವದ ದೇಶದ ಅತ್ಯಂತ ಹಳೆಯ ಪಕ್ಷವು ನಿಧಾನವಾಗಿ 'ಜೋಕ್' ಆಗಿದೆ ಎಂದು ಅವರು ಹೇಳಿದರು.

ADVERTISEMENT

ಸಮರ್ಥ ನಾಯಕತ್ವವನ್ನು ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು, ಆದರೆ ದೇಶದಲ್ಲಿ ಪ್ರಬಲ ವಿರೋಧ ಪಕ್ಷದ ಮಹತ್ವವನ್ನು ಒತ್ತಿ ಹೇಳಿದರು.

'ಅಟಲ್ ಜೀ (ಅಟಲ್ ಬಿಹಾರಿ ವಾಜಪೇಯಿ) ನಾವು ಯಾವಾಗಲೂ ಪಕ್ಷಗಳೆಂಬ ಸಣ್ಣ ಗೋಡೆಗಳ ಮಧ್ಯೆ ಉಳಿಯಬಾರದು ಎಂದು ಹೇಳುತ್ತಿದ್ದರು. ಅದಕ್ಕಾಗಿಯೇ ನಾನು ರಾಷ್ಟ್ರವೆಂಬ ದೇವಸ್ಥಾನದಲ್ಲಿ ನಿಂತು ಇದನ್ನು ಹೇಳುತ್ತಿದ್ದೇನೆ. ಗಾಂಧಿ ಕುಟುಂಬವೆಂಬ ಗುಲಾಮಗಿರಿಯಿಂದ ಹೊರಬರುವುದೇ ಕಾಂಗ್ರೆಸ್‌ಗೆ ಇರುವ ಏಕೈಕ ಚಿಕಿತ್ಸೆ. ಪಕ್ಷದಲ್ಲಿ ಒಬ್ಬರಿಗಿಂತ ಹೆಚ್ಚು ರಾಷ್ಟ್ರೀಯ ನಾಯಕರಿದ್ದಾರೆ' ಎಂದು ಅವರು ಹೇಳಿದರು.

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ತೊರೆಯದಂತೆ ಮತ್ತು ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಸೇರಿ ಜಿ-23 ನಾಯಕರು ಪಕ್ಷದಲ್ಲಿ 'ಸ್ವಾತಂತ್ರ್ಯಕ್ಕಾಗಿ ಹೋರಾಡಲು' ಮತ್ತು ಒಂದು ಕುಟುಂಬದ 'ಬಂಧನ'ದಿಂದ ಹೊರಬರಬೇಕು ಎಂದು ಒತ್ತಾಯಿಸಿದರು.

ಪಕ್ಷದ ಸಾಂಸ್ಥಿಕ ಪರಿಷ್ಕರಣೆಗಾಗಿ ಕಳೆದ ವರ್ಷ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕರ ಗುಂಪನ್ನು ಜಿ-23 ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.