ADVERTISEMENT

ರಾಹುಲ್‌ ಕುರಿತು ಅವಹೇಳನಕಾರಿ ಹೇಳಿಕೆ: ಅಸ್ಸಾಂ ಹಿಮಂತ್‌ ವಿರುದ್ಧ ಆಕ್ರೋಶ

ಪಿಟಿಐ
Published 12 ಫೆಬ್ರುವರಿ 2022, 18:45 IST
Last Updated 12 ಫೆಬ್ರುವರಿ 2022, 18:45 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕಾಂಗ್ರೆಸ್‌ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐನ ಸದಸ್ಯರು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವ ಶರ್ಮಾ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ‘ರಾಹುಲ್‌ ಗಾಂಧಿ ಅವರು ರಾಜೀವ್‌ ಗಾಂಧಿಯ ಮಗ ಎಂಬುದನ್ನು ಸಾಬೀತು ಮಾಡಬೇಕು ಎಂದು ಬಿಜೆಪಿ ಕೇಳಿದೆಯೇ’ ಎಂದು ಶರ್ಮಾ ಅವರು ಶುಕ್ರವಾರ ಹೇಳಿದ್ದರು.

ಶರ್ಮಾ ವಿರುದ್ಧ ಘೋಷಣೆ ಕೂಗಿ, ಅವರ ಪ್ರತಿಕೃತಿಗೆ ಮಸಿ ಹಚ್ಚಲಾಯಿತು. ಶರ್ಮಾ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಉತ್ತರಾಖಂಡದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಶರ್ಮಾ ಅವರು ಮಾತನಾಡಿದ್ದರು. 2016ರಲ್ಲಿ ನಡೆದ ನಿರ್ದಿಷ್ಟ ದಾಳಿ ಮತ್ತು ಕೋವಿಡ್‌–19 ಲಸಿಕೆಯ ಪರಿಣಾಮಕಾರಿತ್ವವನ್ನು ರಾಹುಲ್‌ ಪ್ರಶ್ನಿಸಿದ್ದಾರೆ ಎಂದು ಶರ್ಮಾ ಹೇಳಿದ್ದರು. ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ADVERTISEMENT

ಶರ್ಮಾ ಹೇಳಿಕೆಗೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

‘ಮುಖ್ಯಮಂತ್ರಿಯು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಭಾರತದ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾಡಿದ ಅವಮಾನ ಇದು. ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿಗೆ ತಕ್ಕದಾದ ನಡವಳಿಕೆ ಅಲ್ಲ ಇದು. ಶರ್ಮಾ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು’ ಎಂದು ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ನಿತೀಶ್‌ ಗೌರ್‌ ಅವರು ಒತ್ತಾಯಿಸಿದ್ದಾರೆ.

ಶರ್ಮಾ ಅವರು ವಿವಾದಾತ್ಮಕ ಹೇಳಿಕೆಯ ಮೂಲಕ ಅಸ್ಸಾಂನ ವರ್ಚಸ್ಸಿಗೆ ಮಸಿ ಬಳಿದಿದ್ದಾರೆ ಎಂದು ಅಸ್ಸಾಂ ಕಾಂಗ್ರೆಸ್‌ ಘಟಕವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.