ಖೇಡ(ಗುಜರಾತ್): ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಭಾನುವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ಬಹಳ ಕಾಲದಿಂದ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಸೂರತ್ ಮತ್ತು ಅಹಮದಾಬಾದ್ ಸ್ಫೋಟಗಳಲ್ಲಿ ಗುಜರಾತ್ ಸಾಕಷ್ಟು ಜನರನ್ನು ಕಳೆದುಕೊಂಡಿತ್ತು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ನನ್ನನ್ನು ಟಾರ್ಗೆಟ್ ಮಾಡುವ ಬದಲು ಭಯೋತ್ಪಾದನೆ ಹತ್ತಿಕ್ಕಿ ಎಂದು ಕೇಳಿದ್ದೆ. ಆಗ ದೇಶದಲ್ಲಿ ಭಯೋತ್ಪಾದನೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದರು.
2014ರಲ್ಲಿನ ನಿಮ್ಮ ಒಂದು ಮತ ದೇಶದಲ್ಲಿ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಮಹತ್ತರ ಬದಲಾವಣೆ ತಂದಿದೆ. ಈಗ ದೇಶದ ನಗರಗಳ ಹೊರತಾಗಿ ಗಡಿಯಲ್ಲಿಯೂ ದಾಳಿ ನಡೆಸಲು ಭಯೋತ್ಪಾದಕರು ಸಾಕಷ್ಟು ಯೋಚಿಸಬೇಕೆಂಬ ಸ್ಥಿತಿಯಿದೆ. ಅಷ್ಟರ ಮಟ್ಟಿಗೆ ನಮ್ಮ ಸರ್ಕಾರ ಭಯೋತ್ಪಾದನೆ ಕಡಿವಾಣ ಹಾಕಿದೆ. ಆದರೆ ಕಾಂಗ್ರೆಸ್ ನಮ್ಮ ಸರ್ಜಿಕಲ್ ದಾಳಿಯನ್ನೇ ಪ್ರಶ್ನಿಸುತ್ತಿದೆ ಎಂದರು.
ಕಾಂಗ್ರೆಸ್ಗೆ ಭಯೋತ್ಪಾದನೆಯೂ ವೋಟ್ಬ್ಯಾಂಕ್ ಆಗಿತ್ತು. ಬಾತ್ಲಾ ಹೌಸ್ ಎನ್ಕೌಂಟರ್ನಲ್ಲಿ ಭಯೋತ್ಪಾದನೆ ಬೆಂಬಲಿಸಿ ಕಾಂಗ್ರೆಸ್ ನಾಯಕರು ಕಣ್ಣೀರು ಹಾಕಿದ್ದರು. ಕೇವಲ ಕಾಂಗ್ರೆಸ್ ಮಾತ್ರವಲ್ಲ ಈಗ ಅಂತಹ ಓಲೈಕೆ ರಾಜಕಾರಣ ಮಾಡುವ ಸಾಕಷ್ಟು ಪಕ್ಷಗಳು ಹುಟ್ಟಿಕೊಂಡಿವೆ ಎಂದು ಮೋದಿ ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.