ನವದೆಹಲಿ: ಬಿಜೆಪಿ ಹಾಗೂ ಹಿಂದುತ್ವ ಬೆಂಬಲಿಗರ ದ್ವೇಷ ಭಾಷಣಗಳ ಬಗ್ಗೆ ಫೇಸ್ಬುಕ್ ಇಂಡಿಯಾ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ರಾಜ್ಯಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿತು. ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್, ದೇಶದ ಪ್ರಜಾಪ್ರಭುತ್ವದಲ್ಲಿ ಫೇಸ್ಬುಕ್ ಮಧ್ಯಪ್ರವೇಶದ ಬಗ್ಗೆ ಸಂಸತ್ ಸಮಿತಿಯಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿತು.
ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಕೆ.ಸಿ.ವೇಣುಗೋಪಾಲ್, ‘ಫೇಸ್ಬುಕ್ನ ಪಕ್ಷಪಾತ ಹಾಗೂ ಸಂಶಯಾಸ್ಪದವಾದ ನಡವಳಿಕೆಯು ಮಾಧ್ಯಮಗಳ ವರದಿಯಿಂದ ಬಹಿರಂಗವಾಗಿದೆ. ಫೇಸ್ಬುಕ್, ದೇಶದ ಪ್ರಜಾಪ್ರಭುತ್ವದಲ್ಲಿ ಮಧ್ಯಪ್ರವೇಶಿಸಿದೆ ಎನ್ನುವುದು ಗಂಭೀರ ಆರೋಪವಾಗಿದೆ. 2014ರಿಂದ ನಂತರ ಫೇಸ್ಬುಕ್ನಲ್ಲಿ ಪೋಸ್ಟ್ ಆದಂತಹ ಎಲ್ಲ ದ್ವೇಷ ಭಾಷಣಗಳನ್ನು ವರದಿ ಮಾಡಬೇಕು. ಈ ಕುರಿತು ಸಂಸತ್ ಸಮಿತಿಯಿಂದ ತನಿಖೆಯಾಗಬೇಕು’ ಎಂದರು.
‘ಬಿಜೆಪಿ ನಾಯಕರ ದ್ವೇಷ ಭಾಷಣಗಳ ಬಗ್ಗೆ ಫೇಸ್ಬುಕ್, ವಾಟ್ಸ್ಆ್ಯಪ್ನ ಹಲವು ಅಧಿಕಾರಿಗಳಿಗೆ ಹಲವು ಸಾರಿ ನಾವು ದೂರು ನೀಡಿದ್ದರೂ, ಅದನ್ನು ಅವರು ಗಣನೆಗೇ ತೆಗೆದುಕೊಂಡಿಲ್ಲ. ಈ ಕಾರಣದಿಂದ ಫೇಸ್ಬುಕ್ ಕೇಂದ್ರ ಕಚೇರಿಯು, ಫೇಸ್ಬುಕ್ ಇಂಡಿಯಾ ಕಾರ್ಯಾಚರಣೆಯ ಬಗ್ಗೆ ತನಿಖೆ ನಡೆಸಲು ಸರ್ಕಾರ ಸೂಚಿಸಬೇಕು. ಈ ಕುರಿತು ನಿಗದಿತ ಅವಧಿಯ ಒಳಗೆ ವರದಿ ಸಲ್ಲಿಸಬೇಕು’ ಎಂದು ವೇಣುಗೋಪಾಲ್ ಆಗ್ರಹಿಸಿದರು.
ಫೇಸ್ಬುಕ್ನ ನೀತಿಗಳು ಭಾರತದಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಪರವಾಗಿದೆ ಎನ್ನುವ ಆರೋಪವಿದ್ದ ವರದಿಯೊಂದು ಇತ್ತೀಚೆಗೆ ವಾಲ್ಸ್ಟ್ರೀಟ್ ಜರ್ನಲ್ನಲ್ಲಿ ಪ್ರಕಟವಾಗಿತ್ತು. ಇದು ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.