ADVERTISEMENT

ಉಗ್ರವಾದಕ್ಕೆ ಕಾಂಗ್ರೆಸ್ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದೆ: ಖರ್ಗೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 19:30 IST
Last Updated 28 ನವೆಂಬರ್ 2022, 19:30 IST
ಮಲ್ಲಿಕಾರ್ಜನ ಖರ್ಗೆ
ಮಲ್ಲಿಕಾರ್ಜನ ಖರ್ಗೆ   

ಅಹಮದಾಬಾದ್ : ಭಯೋತ್ಪಾದನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮತಬ್ಯಾಂಕ್ರಾಜಕಾರಣದಲ್ಲಿ ತೊಡಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ತಿರುಗೇಟು ನೀಡಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

‘ಭಯೋತ್ಪಾದಕರ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ದೇಶದಲ್ಲಿ ಶಾಂತಿ ನೆಲೆಸಲು ನಮ್ಮ ನಾಯಕರೇ ಜೀವ ತ್ಯಾಗ ಮಾಡಿದ್ದಾರೆ. ಇಂದಿರಾಗಾಂಧಿ ಅವರು ದೇಶವನ್ನು ಒಗ್ಗೂಡಿಸಲು ತಮ್ಮ ಜೀವವನ್ನು ಬಲಿಕೊಟ್ಟಿದ್ದಾರೆ. ರಾಜೀವ್‌ಗಾಂಧಿ ಅವರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಬಿಜೆಪಿಯ ಯಾವುದಾದರೂ ನಾಯಕರು ಕನಿಷ್ಠ ಪಕ್ಷ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದರೇ’ ಎಂದೂ ಖರ್ಗೆ
ಪ್ರಶ್ನಿಸಿದ್ದಾರೆ.

‘ಇಲ್ಲಿ ನಡೆಯುತ್ತಿರುವುದು ವಿಧಾನಸಭಾ ಚುನಾವಣೆಯೇ ಹೊರತು ಲೋಕಸಭೆ ಚುನಾವಣೆಯಲ್ಲ. ರಾಜ್ಯದ ಮೇಲೆ ಪರಿಣಾಮ ಬೀರುವ ವಿಷಯಗಳು ಇಲ್ಲಿ ಮುಖ್ಯ. ಪ್ರಧಾನಿಯವರು ರಾಜ್ಯ ಸರ್ಕಾರದ ಯಶಸ್ಸು ಹಾಗೂ ವೈಫಲ್ಯಗಳ ಬಗ್ಗೆ ಮಾತನಾಡುವುದು ಒಳಿತು’ ಎಂದು ಖರ್ಗೆ ಸಲಹೆ ನೀಡಿದ್ದಾರೆ.

ADVERTISEMENT

‘ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವ ಭರವಸೆ ನೀಡಿರುವ ಬಿಜೆಪಿ, ಸಮಾಜವನ್ನು ವಿಭಜಿಸಿ ಮತದಾರರಲ್ಲಿ ಗೊಂದಲ ಹುಟ್ಟುಹಾಕಲು ಮುಂದಾಗಿದೆ. ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ನಾಯಕರನ್ನು ಈ ಬಗ್ಗೆ ಮಾತನಾಡುವಂತೆ ಪ್ರಚೋದಿಸಲು ಯತ್ನಿಸುತ್ತಿದೆ. ಅದರೆ ನಾವು ಇಂತಹ ತಂತ್ರಕ್ಕೆ ಬಲಿಯಾಗುವುದಿಲ್ಲ’ ಎಂದು ಖರ್ಗೆ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.