ADVERTISEMENT

ಭಾರೀ ಹಣದೊಂದಿಗೆ ಸಿಕ್ಕಿಬಿದ್ದ ಮೂವರು ಶಾಸಕರನ್ನು ಅಮಾನತು ಮಾಡಿದ ಕಾಂಗ್ರೆಸ್‌

ಪಿಟಿಐ
Published 31 ಜುಲೈ 2022, 7:47 IST
Last Updated 31 ಜುಲೈ 2022, 7:47 IST
ಕಾಂಗ್ರೆಸ್‌ ಶಾಸಕರಿದ್ದ ಕಾರನ್ನು ಹೌರಾದಲ್ಲಿ ಪರಿಶೀಲಿಸುತ್ತಿರುವ ಪೊಲೀಸರು
ಕಾಂಗ್ರೆಸ್‌ ಶಾಸಕರಿದ್ದ ಕಾರನ್ನು ಹೌರಾದಲ್ಲಿ ಪರಿಶೀಲಿಸುತ್ತಿರುವ ಪೊಲೀಸರು    

ನವದೆಹಲಿ: ಪಶ್ಚಿಮ ಬಂಗಾಳದ ಹೌರಾದಲ್ಲಿ ಭಾರೀ ಮೊತ್ತದ ಹಣದೊಂದಿಗೆ ಸಿಕ್ಕಿಬಿದ್ದ ಜಾರ್ಖಂಡ್‌ನ ಮೂವರು ಶಾಸಕರನ್ನು ಕಾಂಗ್ರೆಸ್ ಭಾನುವಾರ ಅಮಾನತುಗೊಳಿಸಿದೆ.

ಪ್ರಕರಣ ಬಯಲಾಗುತ್ತಲೇ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌, ಜಾರ್ಖಂಡ್‌ನಲ್ಲಿ ಬಿಜೆಪಿಯು ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ಭಾಗವೇ ಈ ಘಟನೆ ಎಂದು ಆರೋಪಿಸಿತ್ತು.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಾರ್ಖಂಡ್ ಉಸ್ತುವಾರಿ ಅವಿನಾಶ್ ಪಾಂಡೆ, ‘ತಕ್ಷಣದಿಂದ ಜಾರಿಗೆ ಬರುವಂತೆ ಮೂವರು ಶಾಸಕರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಮಾನತುಗೊಳಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರನ್ನು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಪೊಲೀಸರು ಶನಿವಾರ ರಾತ್ರಿ ತಡೆದು ನಿಲ್ಲಿಸಿದ್ದಾರೆ. ಅವರು ಸಂಚರಿಸುತ್ತಿದ್ದ ವಾಹನದಲ್ಲಿ ಭಾರೀ ಮೊತ್ತದ ಹಣ ಇದ್ದ ಕಾರಣಕ್ಕೆ ಅವರನ್ನು ತಡೆಯಲಾಗಿದೆ. ₹48 ಲಕ್ಷ ನಗದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಶಾಸಕರಾದ ಇರ್ಫಾನ್‌ ಅನ್ಸಾರಿ, ರಾಜೇಶ್‌ ಕಚ್ಚಪ್‌ ಮತ್ತು ನಮನ್‌ ಬಿಕ್ಸಲ್‌ ಕೊಂಗರಿ ಅವರು ಸಂಚರಿಸುತ್ತಿದ್ದ ವಾಹನದಲ್ಲಿ ಭಾರೀ ಮೊತ್ತದ ಹಣ ಇದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹಾಗಾಗಿ, ರಾಷ್ಟ್ರೀಯ ಹೆದ್ದಾರಿ 16ರ ರಾಣಿಹತಿ ಬಳಿ ತಡೆಯಲಾಗಿದೆ. ಎಣಿಕೆ ಯಂತ್ರಗಳನ್ನು ತಂದು ನೋಟುಗಳನ್ನು ಎಣಿಸಲಾಗುವುದು. ಹಣದ ಮೂಲದ ಬಗ್ಗೆ ಶಾಸಕರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ‘ಜಾರ್ಖಂಡ್‌ನಲ್ಲಿ ಬಿಜೆಪಿ ನಡೆಸುತ್ತಿರುವ 'ಆಪರೇಷನ್ ಕಮಲ' ಹೌರಾದಲ್ಲಿ ಬಹಿರಂಗವಾಗಿದೆ. ಮಹಾರಾಷ್ಟ್ರದಲ್ಲಿ ಇ.ಡಿ ಮೂಲಕ ಕಾರ್ಯಗತಗೊಳಿಸಿದ ಯೋಜನೆಯನ್ನೇ ದೆಹಲಿಯಲ್ಲಿರುವ 'ಹಮ್ ದೋ (ನಾವಿಬ್ಬರು)' ಜಾರ್ಖಂಡ್‌ನಲ್ಲಿ ಮಾಡುತ್ತಿದ್ದಾರೆ’ ಎಂದು ಟ್ವಿಟರ್‌ನಲ್ಲಿ ಮಾರ್ಮಿಕ ಪೋಸ್ಟ್‌ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.