ADVERTISEMENT

ತ್ಯಾಜ್ಯ ನೀರಿನಲ್ಲಿ ಕೊರೊನಾ ವೈರಾಣು ಧಾತು

ಕೋವಿಡ್‌ ಹರಡುವಿಕೆ ಮೇಲೆ ನಿಗಾ ಇರಿಸುವಲ್ಲಿ ಮಹತ್ವದ ಮೈಲುಗಲ್ಲು: ಭಾರತೀಯ ವಿಜ್ಞಾನಿಗಳ ಸಾಧನೆ

ಏಜೆನ್ಸೀಸ್
Published 22 ಜೂನ್ 2020, 20:56 IST
Last Updated 22 ಜೂನ್ 2020, 20:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ವಿಜ್ಞಾನಿಗಳು ಸಾರ್ಸ್‌ ಕೊರೊನಾ ವೈರಾಣುವಿನ ಧಾತುಗಳನ್ನು ತ್ಯಾಜ್ಯ ನೀರಿನಲ್ಲಿ ಇದೇ ಮೊದಲ ಬಾರಿಗೆ ಪತ್ತೆ ಮಾಡಿದ್ದಾರೆ.

ಕೋವಿಡ್‌ ಹರಡುವಿಕೆ ಮೇಲೆ ನಿಗಾ ಇರಿಸಲು ತ್ಯಾಜ್ಯನೀರು ಆಧರಿತ ಸಾಂಕ್ರಾಮಿಕ ರೋಗಶಾಸ್ತ್ರವನ್ನು ಬಳಸುವಲ್ಲಿ ಇದೊಂದು ಮಹತ್ವದ ಮೈಲುಗಲ್ಲು.

ಐಐಟಿ–ಗಾಂಧಿನಗರದ ವಿಜ್ಞಾನಿಗಳ ನೇತೃತ್ವದ ತಂಡವು ಅಹಮದಾಬಾದ್‌ ನಲ್ಲಿ ತ್ಯಾಜ್ಯನೀರಿನಲ್ಲಿ ವೈರಾಣುವಿನ ಧಾತುಗಳು ಇರುವುದನ್ನು ಗುರುತಿಸಿದೆ.

ADVERTISEMENT

‘ನೀರಿನಲ್ಲಿ ಪತ್ತೆಯಾದ ಧಾತುಗಳ ಪ್ರಮಾಣವುನಗರದಲ್ಲಿ ಪತ್ತೆಯಾದ ಕೋವಿಡ್‌ ಪ್ರಕರಣಗಳ ಪ್ರಮಾಣಕ್ಕೆ ತಾಳೆಯಾಗುತ್ತಿದೆ. ಈ ಬೆಳವಣಿಗೆಯೊಂದಿಗೆ, ಸೋಂಕು ನಿರ್ವಹಣೆಗೆ ತ್ಯಾಜ್ಯನೀರಿನ ಅಧ್ಯಯನ ಅಂಶವನ್ನು ಆಧರಿಸುವ ದೇಶಗಳ ಪಟ್ಟಿಗೆ ಭಾರತವೂ ಸೇರಿದಂತಾಗಿದೆ’ ಎಂದು ಇಲ್ಲಿನ ಪರಿಸರ ಮತ್ತು ಜಲ ವಿಜ್ಞಾನ ಅಧ್ಯಯನ ಕೇಂದ್ರದ ಜೈವಿಕ ವಿಜ್ಞಾನಿ ಆ್ಯಂಡ್ರ್ಯೂ ಸಿಂಗರ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ನಿರ್ದಿಷ್ಟ ಪ್ರದೇಶವೊಂದರಲ್ಲಿ ಸೋಂಕು ಹರಡಿರುವ ಪ್ರಮಾಣವನ್ನು ಅರಿಯಲು ತ್ಯಾಜ್ಯ ನೀರಿನ ಅಧ್ಯಯನವು ವಿಶ್ವಾಸಾರ್ಹ ವಿಧಾನವಾಗಿದೆ’ ಎಂದಿದ್ದಾರೆ.

ಕೊರೊನಾ ಸೋಂಕಿತರ ಮಲದಲ್ಲಿ ವೈರಾಣು ಅಂಶಗಳು ಇರುತ್ತವೆ ಎಂದು ಇತ್ತಿಚೀನ ಅಧ್ಯಯನದಲ್ಲಿ ದೃಢಪಟ್ಟಿತ್ತು.ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ವಿಸ್ತಾರ ಪ್ರದೇಶದಿಂದ ಬರುತ್ತದೆ. ಸಂಸ್ಕರಣೆ ಪೂರ್ವದಲ್ಲಿ ನೀರಿನಲ್ಲಿನ ಆರ್‌ಎನ್‌ಎ ಪ್ರಮಾಣದ ಪರೀಕ್ಷೆಯಿಂದ ಆ ಭಾಗದಲ್ಲಿ ಎಷ್ಟು ಜನರಿಗೆ ಸೋಂಕು ವ್ಯಾಪಿಸಿದೆ ಎಂದು ಅಂದಾಜಿಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜೂನ್‌ 18ರಂದು ಬಿಡುಗಡೆ ಮಾಡಲಾದ ಹೊಸ ಅಧ್ಯಯನ ವರದಿ ಅನುಸಾರ, ಮೇ 8 ಮತ್ತು 27ರಂದು ಅಹಮದಾಬಾದ್‌ನ ಓಲ್ಡ್‌ ಪಿರಾಣಾ ಕಲುಷಿತ ನೀರು ಸಂಸ್ಕರಣ ಘಟಕದಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ಸಾರ್ಸ್‌ ಕೋವಿಡ್–2 ಸೋಂಕಿನ ಅಂಶಗಳಾದ –ಒಆರ್‌ಎಫ್‌1ಎಬಿ, ಎನ್‌ ಮತ್ತು ಎಸ್‌ – ಅಂಶಗಳು ಹೀಗೇ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದ ಕಲುಷಿತ ನೀರಿನಲ್ಲಿಯೂ ಕಂಡುಬಂದಿದ್ದವು.

ಗಾಂಧಿನಗರದ ಐಐಟಿ ವಿಜ್ಞಾನಿಗಳು ಈ ಕುರಿತ ಅಧ್ಯಯನಕ್ಕೆ ಗುಜರಾತ್‌ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ (ಜಿಬಿಆರ್‌ಸಿ), ಗುಜರಾತ್‌ ಮಾಲಿನ್ಯ ನಿಯಂತ್ರಣ ಮಂಡಳಿ (ಜಿಪಿಸಿಬಿ) ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.