ನವದೆಹಲಿ: ಕೊರೊನಾ ವೈರಸ್ ಸೋಂಕು ಪೀಡಿತ ನಗರ ಚೀನಾದ ವುಹಾನ್ನಿಂದ 324 ಭಾರತೀಯರನ್ನು ಏರ್ ಇಂಡಿಯಾ ವಿಮಾನದಲ್ಲಿ ಶನಿವಾರ ದೆಹಲಿಗೆ ಕರೆತರಲಾಯಿತು.
211 ಮಂದಿ ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ತೆರಳಿದ್ದ 110 ಮಂದಿ ಹಾಗೂ ಮೂವರು ಅಪ್ರಾಪ್ತ ವಯಸ್ಕರನ್ನು ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ತೀವ್ರ ಜ್ವರದ ಕಾರಣ ಆರು ಮಂದಿ ಭಾರತೀಯರು ವಿಮಾನ ಏರುವುದನ್ನು ಚೀನಾದ ಅಧಿಕಾರಿಗಳು ತಡೆದರು ಎಂದು ಹೇಳಿದ್ದಾರೆ.
ಇನ್ನುಳಿದ ಭಾರತೀಯರನ್ನು ಕರೆತರಲು ಇನ್ನೊಂದು ವಿಮಾನವು ಚೀನಾಕ್ಕೆ ತೆರಳಿದೆ ಎಂದೂ ತಿಳಿಸಿದ್ದಾರೆ.
ರಾಮ್ ಮನೋಹರ್ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಯ ಐವರು ವೈದ್ಯರು ಎರಡನೇ ಬಾರಿಯೂ ವಿಮಾನದಲ್ಲಿ ಚೀನಾಕ್ಕೆ ತೆರಳಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಚೀನಾದ ಹುಬೆ ಪ್ರಾಂತ್ಯದಿಂದ ಸ್ಥಳಾಂತರಿಸಿರುವ 300 ಮಂದಿ ವಿದ್ಯಾರ್ಥಿಗಳನ್ನಿರಿಸಲು ಭಾರತೀಯ ಸೇನೆಯು ದೆಹಲಿ ಸಮೀಪದ ಮನೇಸರ್ನಲ್ಲಿ ಚಿಕಿತ್ಸಾ ಶಿಬಿರಗಳನ್ನು ಸಿದ್ಧಪಡಿಸಿದೆ.
ಇಂಡೊ–ಟಿಬೆಟನ್ ಗಡಿ ಪೊಲೀಸ್ ಪಡೆ ಕೂಡ 600 ಹಾಸಿಗೆಗಳ ಚಿಕಿತ್ಸಾ ಶಿಬಿರವನ್ನು ಗುರುಗ್ರಾಮದಲ್ಲಿ ಸ್ಥಾಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.